ನವದೆಹಲಿ : ನೇಪಾಳ ಮತ್ತು ಉತ್ತರ ಭಾರತದಲ್ಲಿ ಶನಿವಾರ ಸಂಭವಿಸಿದ ಭಾರೀ ಭೂಕಂಪದ ಬಳಿಕ ಭಾನುವಾರ ಮಧ್ಯಾಹ್ನ 12.43 ರ ವೇಳೆಗೆ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆ ದಾಖಲಾಗಿದೆ ಎಂದು ತಿಳಿದು ಬಂದಿದೆ.
ನೇಪಾಳದ ಕಠ್ಮಂಡುವಿನಲ್ಲಿ ಈಗಾಗಲೇ ಭಯ ಭೀತರಾಗಿರುವ ಜನ ಕಂಪನದ ಅನುಭವವಾಗುತ್ತಲೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸಾವಿರಾರು ಮಂದಿ ಭಯ ಭೀತರಾಗಿ ಬಯಲಿನಲ್ಲೇ ಅನ್ನಾಹಾರ,ನೀರೂ ಇಲ್ಲದೆ ಬದುಕುತ್ತಿದ್ದಾರೆ.
ಹೊಸತಾಗಿ ಭೂಮಿ ಕಂಪಿಸಿದ ಹಿನ್ನಲೆಯಲ್ಲಿ ಕಠ್ಮಂಡುವಿನ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೇಪಾಳಕ್ಕೆ ರಕ್ಷಣಾ ಸಲಕರಣೆಗಳನ್ನು ಹೊತ್ತೂಯ್ದಿದ್ದ ಭಾರತದ ವಾಯುಪಡೆಯ ವಿಮಾನಗಳು ಲ್ಯಾಂಡಿಂಗ್ ಸಾಧ್ಯವಾಗದೆ ಭಾರತಕ್ಕೆ ವಾಪಾಸಾಗಿವೆ.
ಅಲ್ಲದೇ ದೆಹಲಿ, ಲಕ್ನೋ ಜೈಪುರಮತ್ತು ಬಿಹಾರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ನಂತರ ಹಿಮಾಲಯದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಪರ್ವತಾರೋಹಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈಗಾಗಲೇ ನೇಪಾಳದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಮತ್ತೆ ಭೂಕಂಪನ ಸಂಭವಿಸಿದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಜೆ 3.30 ಕ್ಕೆ ಉನ್ನತ ಮಟ್ಟದ ತುರ್ತು ಸಭೆ ಕರೆದಿದ್ದಾರೆ.