ನವದೆಹಲಿ : ಆಪ್ ರ್ಯಾಲಿಯಲ್ಲಿ ರೈತನ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ಟಿ.ವಿ ಚಾನಲ್ ನಲ್ಲಿ ಆಮ್ ಆದ್ಮಿ ಪಕ್ಷದ ಮತ್ತೊಂದು ನಾಟಕೀಯ ಬೆಳವಣಿಗೆ ನಡೆದಿದೆ.
ಗಜೇಂದ್ರ ಸಿಂಗ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಖಾಸಗಿ ಚಾನೆಲ್ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ನಾಯಕ ಅಶುತೋಷ್, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಗಜೇಂದ್ರ ಸಿಂಗ್ ಪುತ್ರಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಕೆಯೊಂದಿಗೆ ಮಾತನಾಡಿದ ಆಪ್ ನಾಯಕ ಅಶುತೋಷ್, ನಿಮ್ಮ ತಂದೆ ಸಾವನ್ನಪ್ಪಿರುವುದಕ್ಕೆ ನಮ್ಮನ್ನು ಕ್ಷಮಿಸು ಎಂದು ಗಜೇಂದ್ರ ಸಿಂಗ್ ಪುತ್ರಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ರೈತನ ಸಾವಿನ ಪ್ರಕರಣವನ್ನು ರಾಜಕೀಯಗೊಳಿಸದೇ ಇರಲು ಮನವಿ ಮಾಡಿದ ಅಶುತೋಷ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದೇ ಚರ್ಚೆಯಲ್ಲಿ ಪಾಲ್ಗೊಂಡು ಪ್ರತಿಕ್ರಿಯಿಸಿರುವ ಬಿಜೆಪಿಯ ಮುಖಂಡ ಸಂಬಿತ್ ಪಾತ್ರ, ತಮಗೆ ಈ ವಿಷಯವನ್ನು ರಾಜಕೀಯಗೊಳಿಸಲು ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟಿವಿ ಕಾರ್ಯಕ್ರಮದಲ್ಲಿ ಅತ್ತಿರುವ ಅಶುತೋಷ್, ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳಲು ಮರವೇರಿದಾಗ ಆತನನ್ನು ಕಾಪಾಡಲು ದೆಹಲಿ ಸಿ.ಎಂ ಮರಹತ್ತಲು ಸಾಧ್ಯವಿಲ್ಲ ಎಂದು ಘಟನೆ ನಡೆದ ದಿನ ಉದ್ಧಟತನದ ಉತ್ತರ ನೀಡಿದ್ದರು. ನಂತರ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದರು.
ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ನವದೆಹಲಿಯಲ್ಲಿ ನಡೆಸಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದ ಗಜೇಂದ್ರ ಸಿಂಗ್ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಾದ 2 ದಿನಗಳ ಬಳಿಕ ಅರವಿಂದ್ ಕೇಜ್ರಿವಾಲ್ ಕ್ಷಮೆಯಾಚಿಸಿದ್ದರು. ಈಗ ಟಿವಿ ಕಾರ್ಯಕ್ರಮದಲ್ಲಿ ಅಳುವ ಮೂಲಕ ಆಪ್ ಮುಖಂಡ ಅಶುತೋಷ್ ಕ್ಷಮೆಯಾಚಿಸಿದ್ದಾರೆ.