ಬೆಂಗಳೂರು : ಗ್ರಾಮೀಣ ಪ್ರದೇಶದ ಅಕ್ರಮ-ಸಕ್ರಮ ಯೋಜನೆಗೆ ಅರ್ಜಿಸಲ್ಲಿಸುವ ಅವಧಿಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ಜತೆಗೆ ಎಪಿಎಲ್ ಸೇರಿದಂತೆ ಎಲ್ಲಾ ಬಡವರಿಗೂ ಅಕ್ರಮ-ಸಕ್ರಮ ಯೋಜನೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ 2015ನ್ನು ಮಂಡಿಸಿ ಮಾತನಾಡಿದ ಅವರು, ಈಗಾಗಲೇ 30 40 , 40 60 ಈಗಾಗಲೇ ಅಕ್ರಮಸಕ್ರಮ ಯೋಜನೆಗೆ ಒಳಪಡುತ್ತಿದೆ.
ಬಿಪಿಎಲ್ ಕುಟುಂಬಗಳು ಸರ್ಕಾರ ಜಾಗದ 50-80 ಅಳತೆ ನಿವೇಶನದಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಅವಕಾಶವಿದೆ. ಇನ್ನೂ ಮುಂದೆ ಎಪಿಎಲ್ ಸೇರಿದಂತೆ ಎಲ್ಲಾ ಬಡವರಿಗೆ ಅಕ್ರಮ-ಸಕ್ರಮ ಯೋಜನೆ ವಿಸ್ತರಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಲ್ಲಾ ವರ್ಗದ ಬಡವರಿಗೂ ಅಕ್ರಮ-ಸಕ್ರಮ ವಿಸ್ತರಣೆ ಮಾಡಿ, ರೈತರನ್ನು ಒಳಗೊಂಡು ಸಮಗ್ರ ಕಾಯ್ದೆ ಜಾರಿಗೆ ತನ್ನಿ ಎಂದು ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಹಳಷ್ಟು ಶಾಸಕರು ಪಕ್ಷಾತೀತವಾಗಿ ಕಲಾಪದಲ್ಲಿ ಒತ್ತಾಯಿಸಿದರು.
ಸದಸ್ಯರ ಒತ್ತಾಯಕ್ಕೆ ಧ್ವನಿಗೂಡಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, 50-80ರ ಅಳತೆಯ ನಿವೇಶನ ಸಕ್ರಮಕ್ಕೆ ಮೇ 31ರ ವರೆಗೆ ಕಾಲಾವಕಾಶ ನೀಡಲಾಗಿದೆ. ಆದರೆ ನಾಡ ಕಚೇರಿಯಲ್ಲಿ ಇದಕ್ಕೆ ಅರ್ಜಿ ಸ್ವೀಕರಿಸುತ್ತಿಲ್ಲ. ತಹಸೀಲ್ದಾರ್, ನಾಡ ಕಚೇರಿ ಅಥವಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಅರ್ಜಿ ಸ್ವೀಕರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಜೆಡಿಎಸ್ನ ಶಾಸಕ ಶಿವಲಿಂಗೇಗೌಡ, 5080 ಅಳತೆಯ ನಿವೇಶನ ಸಕ್ರಮಕ್ಕೆ ನಿಗದಿ ಪಡಿಸಿರುವ ಶುಲ್ಕ ದುಬಾರಿಯಾಗಿದೆ. ನಗರ ಪ್ರದೇಶದ ಮಾದರಿಯಲ್ಲಿ ಶುಲ್ಕ ನಿಗದಿ ಮಾಡಿದರೆ ಪಾವತಿಸಲು ಬಡವರಿಗೆ ಶಕ್ತಿ ಇರುವುದಿಲ್ಲ. ರೈತರು ಹಾಗೂ ಕೆಳ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಶುಲ್ಕ ನಿಗದಿ ಮಾಡಿ, ಸಾಧ್ಯವಾದರೆ ಉಚಿತವಾಗಿಯೇ ಗ್ರಾಮೀಣ ಭಾಗದಲ್ಲಿ ಸಕ್ರಮ ಯೋಜನೆ ಜಾರಿಗೆ ತನ್ನಿ ಎಂದು ಒತ್ತಾಯಿಸಿದರು. ಅದಕ್ಕೆ ಉತ್ತರ ನೀಡಿದ ಸಚಿವ ಶ್ರೀನಿವಾಸ ಪ್ರಸಾದ್, ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸ್ವೀಕರಿಸಲು ನಾಡ ಕಚೇರಿಗೆ ಸೂಚನೆ ನೀಡುತ್ತೇವೆ. ಮಾರ್ಗಸೂಚಿ ದರವನ್ನು ತಲಾ ಆದಾಯದ ಆಧಾರದ ಮೇಲೆ ಮಾಡುತ್ತೇವೆ. ಆಯಾ ಪ್ರದೇಶದ ತಲಾ ಆದಾಯ ಅಂದಾಜು ಮಾಡಿಯೇ ನಿಗದಿ ಮಾಡಲಾಗುವುದು. ಮಾರ್ಗಸೂಚಿಗಿಂತಲೂ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಅರ್ಜಿ ಸಲ್ಲಿಸಲು ಇರುವ ಕಾಲಾವಧಿಯನ್ನು ಮೇ 31ರ ವರೆಗೆ ನಿಗದಿ ಪಡಿಸಲಾಗಿದೆ. ಅದನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಅಕ್ರಮ ಸಕ್ರಮ ಯೋಜನೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಈಗಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಸಮಸ್ಯೆಗಳನ್ನು ಬಗೆ ಹರಿಸಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.