ಬೆಂಗಳೂರು : 'ಸೌರಶಕ್ತಿ' ಹಾಗೂ ನವೀಕೃತ ಇಂಧನ ಉತ್ಪಾದನೆಗೆ ಆದ್ಯತೆ ನೀಡುವುದರಲ್ಲಿ ರಾಜ್ಯ ಸರ್ಕಾರ ದೇಶಕ್ಕೇ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಏ.23ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಸಿರು ಶೃಂಗಸಭೆ-2015 ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಬಂಡವಾಳ ಹೂಡಿಕೆದಾರರಿಗೆ ಹೆಚ್ಚು ಪ್ರಶಸ್ತವಾದ ಸ್ಥಳ ಎಂದು ಹೇಳಿದ್ದಾರೆ. ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೇ 2014ರಲ್ಲಿ ಸೌರಶಕ್ತಿ ಉತ್ಸವ ಏರ್ಪಡಿಸಿ ಸೌರಶಕ್ತಿ ಬಳಕೆ, ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿದ ಮೊದಲ ರಾಜ್ಯವಾಗಿರುವುದಲ್ಲದೆ ದೇಶಕ್ಕೆ ಮಾದರಿಯಾಗಿದೆ ಎಂದು ಸಿ.ಎಂ ತಿಳಿಸಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ನವೀಕೃತ ಇಂಧನವನ್ನು 60 ಗಿಗಾ ವ್ಯಾಟ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ನೂತನ ಘಟಕ ಆರಂಭಿಸುವವರಿಗೂ ಪ್ರೋತ್ಸಾಹಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಬೇಡಿಕೆ ಆಧರಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿ.ಎಂ ಮಾಹಿತಿ ನೀಡಿದ್ದಾರೆ.
ಒಣ ಭೂಮಿಯಲ್ಲಿ ಸೌರಶಕ್ತಿ ಘಟಕಗಳನ್ನು ಅಳವಡಿಸಿ ಅದರಿಂದ ಬರುವ ವಿದ್ಯುತ್ ನ್ನು ಬಳಸಿಕೊಂಡು ಉಳಿದ ವಿದ್ಯುತ್ ನ್ನು ನಮಗೆ ಕೊಡಬಹುದು. ಪ್ರತಿ ಯೂನಿಟ್ಗೆ 9.50 ರೂ. ನೀಡಲಿದ್ದೇವೆ. ಇಂತಹ ಉತ್ತಮ ಯೋಜನೆಯನ್ನು ಅಳವಡಿಸಿಕೊಳ್ಳಲು ರೈತರಿಗೆ ಸಿ.ಎಂ ಕರೆ ನೀಡಿದ್ದಾರೆ. ಸಮಾರಂಭದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಸಂಪತ್ ರಾಮನ್, ನಿಕಟಪೂರ್ವ ಅಧ್ಯಕ್ಷ ಶಿವಕುಮಾರ್, ನವೀಕೃತ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.