Untitled Document
Sign Up | Login    
Dynamic website and Portals
  
April 21, 2015

ಬಿಬಿಎಂಪಿ ವಿಭಜನೆಗೆ ಪರಿಷತ್ ನಲ್ಲಿ ಅಡ್ಡಿ

: ಬಿಬಿಎಂಪಿಯನ್ನು ಮೂರು ವಿಭಾಗಗಳನ್ನಾಗಿ ವಿಭಜಿಸುವ ನಿರ್ಧಾರ ಕೈಗೊಂಡಿರುವ ರಾಜ್ಯ ಸರಕಾರ, ಪ್ರತಿಪಕ್ಷ ವಿರೋಧವನ್ನು ಲೆಕ್ಕಿಸದೇ ಇದಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ವಿಧಾನಸಭೆಯ ಅಂಗೀಕಾರ ಪಡೆದಿದೆ. ಆದರೂ, ಬಿಬಿಎಂಪಿ ವಿಭಜನೆ, ಚುನಾವಣೆ ಘೋಷಣೆ ಕುರಿತ ಗೊಂದಲ ಮುಂದುವರಿದಿದೆ.

ಈ ಮಧ್ಯೆ, ಚುನಾವಣೆ ದಿನಾಂಕ ಪ್ರಕಟಿಸಲು ಏ.20ರ ಸಂಜೆ 6ಗಂಟೆಗೆ ಚುನಾವಣೆ ಆಯೋಗ ಕರೆದಿದ್ದ ಸುದ್ದಿಗೋಷ್ಠಿಗೆ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶದಿಂದ ತಡೆಬಿದ್ದಿದೆ. ಇದರಿಂದಾಗಿ ವಿಭಜನೆಯ ಜಪ ಮಾಡುತ್ತಿರುವ ಸರಕಾರಕ್ಕೆ ತುಸು ನೆಮ್ಮದಿ ದೊರೆತಿದೆ.

ಸೋಮವಾರ ವಿಚಾರಣೆ ಕೈಗೆತ್ತಿಕೊಂಡ ವಿಭಾಗೀಯ ಪೀಠ, ಏ.22ರಂದು ಅಂತಿಮ ವಿಚಾರಣೆ ನಡೆಸಲು ನಿರ್ಧರಿಸಿ, ಅಲ್ಲಿಯವರೆಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದಂತೆ ಚುನಾವಣೆ ಆಯೋಗಕ್ಕೆ ಆದೇಶಿಸಿತು. ಏ.20ರಂದೇ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡರೆ ಗತಿಯೇನು ಎಂಬ ಆತಂಕದಲ್ಲಿದ್ದ ಸರಕಾರಕ್ಕೆ ಕೋರ್ಟ್ ಆದೇಶದಿಂದ ಸಮಾಧಾನ ದೊರೆತಿದೆ. ಈ ಮಧ್ಯೆ, ಬಿಬಿಎಂಪಿ ವಿಸರ್ಜನೆ ಮಾಡುವುದನ್ನೂ ಸಹ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ವಿಭಜನೆ ಕುರಿತು ಆಡಳಿತಾಧಿಕಾರಿ ಯಾವುದೇ ನೀತಿ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯನ್ನು ಏ.22ಕ್ಕೆ ನಿಗದಿಪಡಿಸಿದೆ.

ಬಿಬಿಎಂಪಿ ವಿಸರ್ಜನೆ, ಹೊಸ ಪಾಲಿಕೆ ಸೃಷ್ಟಿಸಲು ಕಾನೂನಾತ್ಮಕ ಅವಕಾಶ ಕಲ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಸೋಮವಾರ ಒಂದು ದಿನದ ಅಧಿವೇಶನ ಕರೆದಿತ್ತು. ವಿಧೇಯಕ ಮಂಡಿಸಬಾರದು, ಇದು ಬೆಂಗಳೂರು ಬ್ರಾಂಡ್‌ ಗೆ ಧಕ್ಕೆ ತರಲಿದೆ. ಕೂಡಲೇ ಚುನಾವಣೆ ನಡೆಸಿ ಎಂದು ವಿಪಕ್ಷ ಬಿಜೆಪಿ, ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಪಟ್ಟು ಹಿಡಿದರು. ಪ್ರತಿಪಕ್ಷ ಸದಸ್ಯರ ಆಕ್ರೋಶ, ಧರಣಿ, ವಿಧೇಯಕ ಪ್ರತಿಹರಿದು ಹಾಕಿದ ಘಟನೆಗಳ ಮಧ್ಯೆಯೇ ಬಹುಮತ ಹೊಂದಿದ ಕಾಂಗ್ರೆಸ್ ವಿಧೇಯಕಕ್ಕೆ ಅಂಗೀಕಾರ ಪಡೆಯಿತು.

ಸೋಮವಾರವೇ ಬಿಬಿಎಂಪಿ ವಿಭಜನೆ, ಚುನಾವಣೆ ಘೋಷಣೆಯ ಎರಡು ಆಯ್ಕೆಗಳಲ್ಲಿ ಯಾವುದಾದರೊಂದು ಅಂತಿಮ ಹಾದಿ ತೆರೆದುಕೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ವಿಧಾನಮಂಡಲದ ಉಭಯ ಸದನಗಳಲ್ಲಿ ವಿಧೇಯಕಕ್ಕೆ ಒಪ್ಪಿಗೆ ದೊರೆತಿದ್ದರೆ, ವಿಭಜನೆಯ ಹಣೆಬರಹವನ್ನು ನಿರ್ಧರಿಸುವ ಅಸ್ತ್ರ ರಾಜಭವನಕ್ಕೆ ಸ್ಥಳಾಂತರವಾಗುತ್ತಿತ್ತು. ಆದರೀಗ, ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸಮ್ಮತಿ ಸಿಗಲಿಲ್ಲ, ತಿರಸ್ಕಾರವೂ ಆಗಲಿಲ್ಲ. ಸದ್ಯ ವಿಧೇಯಕ ತ್ರಿಶಂಕು ಸ್ಥಿತಿಯಲ್ಲಿದೆ.

ಈ ಗೊಂದಲದ ಮಧ್ಯೆ ಏ.22ರಂದು ಮತ್ತೆ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಅಂತಿಮ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಮಾತ್ರ ಚುನಾವಣೆ ಘೋಷಣೆಯಾಗದಂತೆ ಆಯೋಗಕ್ಕೆ ನಿರ್ಬಂಧವಿದೆ. ವಿಧಾನಮಂಡಲದಲ್ಲಿ ಅಂಗೀಕಾರಕ್ಕೆ ವಿಧೇಯಕ ಬಾಕಿ ಇರುವುದರಿಂದ ಹೈಕೋರ್ಟ್ ಪೀಠವು ಏ.22ರಂದು ಯಾವುದೇ ಅಂತಿಮ ಆದೇಶ ಹೊರಡಿಸುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ.

ಏ.23ಕ್ಕೆ ಕಲಾಪ ಮುಂದೂಡಿಕೆಯಾಗಿರುವುದರಿಂದಾಗಿ ಗೊಂದಲ ಮರೆಯಾಗಿ, ಸ್ಪಷ್ಟತೆಯ ಕುರುಹು ಕಾಣಿಸಬಹುದೇ ಕಾದುನೋಡಬೇಕಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited