ಬೆಂಗಳೂರು : ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಲಾಗಿದೆ.
ಜಿಲ್ಲಾವಾರು ಪ್ರಾತಿನಿಧ್ಯಕ್ಕಿಂತ ಸಮುದಾಯ ಆಧಾರಿತ ಪ್ರಾತಿನಿಧ್ಯ ನೀಡಬೇಕು. ಅದರಲ್ಲೂ ಹಿಂದುಳಿದ ವರ್ಗದ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮುದಾಯದ ಶಾಸಕರ ಸಂಖ್ಯೆಗನುಗುಣವಾಗಿ ಸಚಿವ ಸಂಪುಟದಲ್ಲೂ ಸ್ಥಾನಮಾನ ಸಿಗಬೇಕು. ಇಲ್ಲದಿದ್ದರೆ ನಾವು ಶಾಸಕರಾಗಿದ್ದು ಏನು ಪ್ರಯೋಜನ. ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾನಸಿಕವಾಗಿ ಸಿದ್ಧವಿರುವುದಾಗಿ ಕೆಲವು ಶಾಸಕರು ಈಗಾಗಲೇ ಸಂದೇಶ ರವಾನಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ರೈತರ ರ್ಯಾ ಲಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ತೆರಳಿರುವ ಕೆಲವು ಶಾಸಕರು ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೂ ತಂದು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.
ಸಚಿವ ಸಂಪುಟದಲ್ಲಿ ಬೇರೆ ಜಾತಿ, ಸಮುದಾಯಕ್ಕೆ ಸಿಕ್ಕಿರುವ ಪ್ರಾತಿನಿಧ್ಯದಂತೆ ಹಿಂದುಳಿದ ವರ್ಗಗಳ ಸಮುದಾಯಕ್ಕೂ ಸಿಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದೇವೆ ಎಂದು ಕೆಲ ಶಾಸಕರು ತಿಳಿಸಿದ್ದಾರೆ. ಎರಡು-ಮೂರು ಬಾರಿ ಶಾಸಕರಾಗಿದ್ದರೂ ಕೂಡ ನಮ್ಮನ್ನು ಪರಿಗಣಿಸಿಲ್ಲ. ನಮ್ಮ ಸರ್ಕಾರ ಆಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಸಚಿವ ಸ್ಥಾನದ ಭಾಗ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.