BW News Bureau : ರಾಜ್ಯ ಸರ್ಕಾರ ಬಿಬಿಎಂಪಿ ವಿಸರ್ಜನೆಗೆ ಶನಿವಾರ ಆದೇಶ ಹೊರಡಿಸಿದ್ದು, ಆಡಳಿತಾಧಿಕಾರಿಯಾಗಿ ಟಿ.ಎಂ.ವಿಜಯ ಭಾಸ್ಕರ್ ಅಧಿಕಾರ ಸ್ವೀಕರಿಸಿದ್ದಾರೆ.
ರಾಜೇಂದ್ರಕುಮಾರ್ ಕಟಾರಿಯಾ ವರದಿಯಲ್ಲಿ ಬಿಬಿಎಂಪಿಯ ತ್ಯಾಜ್ಯ ನಿರ್ವಹಣೆ, ಜಾಹೀರಾತು ವಿಭಾಗ, ಒಎಫ್ ಸಿಯಲ್ಲಿನ ಅಕ್ರಮ ಸೇರಿದಂತೆ ಹಲವು ಅವ್ಯವಹಾರಗಳನ್ನು ತಿಳಿಸಲಾಗಿತ್ತು. ಇದನ್ನೇ ಆಧರಿಸಿ ಸರ್ಕಾರ ಬಿಬಿಎಂಪಿ ವಿಸರ್ಜನೆಗೆ ಆದೇಶ ಹೊರಡಿಸಿದೆ. ಬಿಬಿಎಂಪಿಯ ಕೌನ್ಸಿಲ್ ಕೆಎಂಸಿ ಕಾಯ್ದೆ-1976ರ ಪ್ರಕಾರ ಅಧಿಕಾರ ಚಲಾಯಿಸುವುದು ಹಾಗೂ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದು ಕಂಡು ಬಂದಿಲ್ಲ.
ಆರ್ಥಿಕ ನಿರ್ವಹಣೆಯಲ್ಲಿ ಅಶಿಸ್ತಿನ ನಡವಳಿಕೆ ತೋರಿ ಆರ್ಥಿಕ ನಷ್ಟ ಉಂಟುಮಾಡಿರುವುದು ಹಾಗೂ ಪಾಲಿಕೆ ಹಿತಾಸಕ್ತಿಗೆ ಧಕ್ಕೆಯಾಗುವಂತೆ ಕೆಲಸ ಮಾಡಿರುವುದರಿಂದ ಕೌನ್ಸಿಲ್
ವಿಸರ್ಜಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶ ಹೊರಬಿದ್ದ ನಂತರವೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ.ಎಂ.ವಿಜಯ ಭಾಸ್ಕರ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತು.
ಅವರು ಶನಿವಾರ ಸಂಜೆಯೇ ಬಿಬಿಎಂಪಿಗೆ ಭೇಟಿ ನೀಡಿ ಅಧಿಕಾರ ಸ್ವೀಕರಿಸಿದರು. ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಕುಮಾರ್ ನಾಯಕ್ ಅವರನ್ನು ಆಯ್ತುಕರಾಗಿ ನೇಮಿಸಿದ್ದು, ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಈಗಿರುವ ಆಯುಕ್ತ ಲಕ್ಷ್ಮಿನಾರಾಯಣ ಅವರು ವರ್ಗವಾಗಿದ್ದು, ಅವರಿಗಿನ್ನು ಹುದ್ದೆ ತೋರಿಸಿಲ್ಲ.
ವಿಸರ್ಜನೆಗೆ ಶೋಕಾಸ್ ನೋಟಿಸ್ ಬಗ್ಗೆ ಚರ್ಚಿಸಲು ಕೌನ್ಸಿಲ್ ಸಭೆ ಕರೆದಾಗ ಸದಸ್ಯರಿಗೆ ಕಟಾರಿಯಾ ವರದಿಯ ಪ್ರತಿ ನೀಡಬೇಕೆಂದು ಸದಸ್ಯರು ಮನವಿ ಮಾಡಿದ್ದರು. ಇದರಂತೆ ಸಭೆಯ ನಂತರ ಸರ್ಕಾರಕ್ಕೆ ನೀಡಿದ್ದ ಉತ್ತರದಲ್ಲಿ ವರದಿಯ ಪ್ರತಿಯನ್ನು ನೀಡಿ ನಂತರ ಮತ್ತೊಮ್ಮೆ ಚರ್ಚಿಸಲು ಅವಕಾಶ ನೀಡುವಂತೆ ಕೋರಲಾಗಿತ್ತು. ಆದೇಶ ಪತ್ರದಲ್ಲಿರುವಂತೆ ಮೇಯರ್ ಶಾಂತಕುಮಾರಿ, ಆಯುಕ್ತ ಲಕ್ಷ್ಮಿನಾರಾಯಣ ಹಾಗೂ ಸದಸ್ಯ ಪದ್ಮನಾಭರೆಡ್ಡಿ ಸರ್ಕಾರಕ್ಕೆ ಉತ್ತರ ನೀಡಿದ್ದಾರೆ. ಇದರಲ್ಲಿ ವರದಿಯ ಪ್ರತಿ ನೀಡುವಂತೆ ಪದ್ಮನಾಭರೆಡ್ಡಿ ಕೋರಿರುವುದನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಂಡಿಲ್ಲ. ಷೋಕಾಸ್ ನೋಟಿಸ್ನಲ್ಲಿ ಉಲ್ಲೇಖಿಸಿರುವ ಸಿಐಡಿ ವರದಿ, ನ್ಯಾಯಾಲಯದ ಆದೇಶಗಳು, ಪತ್ರಿಕಾ ವರದಿಯ ಪ್ರತಿ ಒದಗಿಸಲೂ ಕೇಳಲಾಗಿತ್ತು. ಆದರೆ ಇದಕ್ಕೂ ಆದೇಶದಲ್ಲಿ ಸ್ಪಷ್ಟನೆ ನೀಡಿರುವ ಸರ್ಕಾರ, ಇದರಲ್ಲಿ ಪರಿಗಣಿಸಬಹುದಾದ ಯಾವುದೇ ಅಂಶಗಳು ಕಾಣುತ್ತಿಲ್ಲ ಎಂದು ಹೇಳಿದೆ.