ನವದೆಹಲಿ : ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೊಸ ವಿವಾದ ಸೃಷ್ಠಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿ, ಇಡೀ ದೇಶವೇ ಶಪಿಸುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿ ಮಸರತ್ ಆಲಂ ನನ್ನು ಸಾಹೇಬ್ ಎಂದು ಗೌರವದಿಂದ ಸಂಬೋಧಿಸುವ ಮೂಲಕ ದಿಗ್ವಿಜಯ್ ಸಿಂಗ್ ವಿವಾದ ಉಂಟು ಮಾಡಿದ್ದಾರೆ.
ಪ್ರತ್ಯೇಕತಾವಾದಿ ಮಸರತ್ ಆಲಂ ನನ್ನು ಬಂಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ದಿಗ್ವಿಜಯ್ ಸಿಂಗ್, ಜಮ್ಮು-ಕಾಶ್ಮೀರ ಸರ್ಕಾರ ಪ್ರತ್ಯೇಕತಾವಾದಿ ಮಸರತ್ ಆಲಂ ಸಾಹೇಬರನ್ನು ಯಾವ ಸೆಕ್ಷನ್ ಅಡಿಯಲ್ಲಿ ಬಂಧಿಸಿದೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ನಮಗೆ ಸರ್ಕಾರ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇದೇ ವೇಳೆ ಕೆನಡಾದಲ್ಲಿ ಕಾಂಗ್ರೆಸ್ಸನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ದಿಗ್ವಿಜಯ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ, ಆಂತರಿಕ ರಾಜಕೀಯದ ಬಗ್ಗೆ ವಿದೇಶದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಆಂತರಿಕ ವಿಷಯಗಳ ಬಗ್ಗೆ ಮಾತನಾಡುವುದು ಮೋದಿ ಅವರ ಒಡೆದು ಆಳುವ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
1947ರಿಂದ ಈ ವರೆಗಿನ ಇತಿಹಾಸವನ್ನು ಮೋದಿ ತಿಳಿಯಲಿ, ಯಾವುದೇ ಪ್ರಧಾನಿಯೂ ಸಹ ದೇಶದ ಆಂತರಿಕ ರಾಜಕೀಯದ ಬಗ್ಗೆ ವಿದೇಶಗಳಲ್ಲಿ ಪ್ರಸ್ತಾಪಿಸಿಲ್ಲ, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಾಗ ಅಮೆರಿಕಾದಲ್ಲಿರುವ ತಮ್ಮ ವಿರೋಧಿಗಳ ಬಗ್ಗೆ ಮಾತನಾಡಿದ್ದರೇ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಇದೇ ವೇಳೆ ಮೋದಿ ಬಗ್ಗೆ ಒಬಾಮ ಮೆಚ್ಚುಗೆಯ ಲೇಖನ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್, ಅಡಾಲ್ಫ್ ಹಿಟ್ಲರ್ ನ್ನು ಪ್ರಶಂಸಿಸಬೇಕಾದರೆ, ಬ್ರಿಟನ್ ನ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಕೂಡಾ ತಮ್ಮ ಮಾತುಗಳನ್ನು ಹಿಂಪಡೆಯಬೇಕಾಯಿತು ಎಂದು ಪ್ರಧಾನಿ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ್ದಾರೆ.