BW News Bureau : ಬಿಬಿಎಂಪಿ ಚುನಾವಣೆಗೆ ತಡೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಏಪ್ರಿಲ್ 20ಕ್ಕೆ ಮುಂದೂಡಿದೆ.
ಹೈಕೋರ್ಟ್ ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ರವಿವರ್ಮಕುಮಾರ್ ಅವರು 2011ರ ಜನಗಣತಿಯಂತೆ ಕ್ಷೇತ್ರ ಪುನರ್ ವಿಂಗಡಣೆಯಾಗಿಲ್ಲ. ಹೀಗಾಗಿ ಹೈಕೋರ್ಟ್ ನಿರ್ದೇಶನ ಪ್ರಜಾಪ್ರಭುತ್ವದ ಕಲ್ಪನೆಗೆ ವಿರುದ್ಧವಾಗಿದ್ದು, ಬಿಬಿಎಂಪಿ ಚುನಾವಣೆಗೆ ತಡೆ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ಮುಖ್ಯನಾಯಮೂರ್ತಿ ಡಿ.ಹೆಚ್.ವಘೇಲಾ, ಎಲ್ಲಾ ಚುನಾವಣೆಗಳು ಹೀಗೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ಸಂವಿಧಾನಕ್ಕೆ ಪ್ರಾಮುಖ್ಯತೆ ನೀಡುವುದು ನಮ್ಮ ಕರ್ತವ್ಯ ಎಂದರು.
ಸರ್ಕಾರ ಬಿಬಿಎಂಪಿ ವಿಭಜನೆ ಮಾಡಲು ನಿರ್ಧರಿಸಿದ್ದು, ವಿಭಜನೆಯಾದರೆ ಬಿಬಿಎಂಪಿ ರದ್ದಾಗುತ್ತದೆ. ಹೀಗಾಗಿ ಚುನಾವಣೆ ನಡೆಸುವುದು ವ್ಯರ್ಥ ಮತ್ತು ಇದರಿಂದ ಹಣ ಮತ್ತು ಸಮಯ ವ್ಯರ್ಥವಾಗಲಿದೆ ಎಂದು ರವಿವರ್ಮಕುಮಾರ್ ವಾದ ಮಂಡಿಸಿದರು.
ಇದೇ ವೇಳೆ ನ್ಯಾಯಮೂರ್ತಿ ರಾಮ್ ಮೋಹನ್ ರೆಡ್ಡಿ ಅವರು, ಕಳೆದ 5 ವರ್ಷಗಳಿಂದ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ವಾದ-ಪ್ರತಿವಾದಗಳ ಬಳಿಕ ವಿಚಾರಣೆಯನ್ನು ಏಪ್ರಿಲ್ 20ಕ್ಕೆ ಮುಂದೂಡಲಾಯಿತು.