ಬೆಂಗಳೂರು : ಸಕಾಲದಲ್ಲಿ ಸೇವೆ ನೀಡುವ ಏಷ್ಯಾದ ಮೊಟ್ಟಮೊದಲ ಸರ್ಕಾರಿ 'ಬೈಕ್ ಆಂಬುಲೆನ್ಸ್' ಗೆ ಚಾಲನೆ ದೊರೆತಿದೆ. ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ ಈ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.
ಈ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 30 ಬೈಕ್ ಆಂಬುಲೆನ್ಸ್ ಗಳು ಸೇವೆ ಆರಂಭಿಸಲಿವೆ.
ವರ್ಷದ 365 ದಿನಗಳು, ದಿನದ 24 ಗಂಟೆ ಕಾರ್ಯನಿರ್ವಹಿಸುವ ಈ ಆಂಬುಲೆನ್ಸ್ ಗಳಲ್ಲಿ ಆಮ್ಲಜನಕ, ರಕ್ತಸ್ರಾವ ತಡೆಗಟ್ಟುವ ಉಪಕರಣ, ನೆಕ್ ಬೆಲ್ಟ್, ಸ್ಟಿಚ್ ಬಾಕ್ಸ್ ಒಳಗೊಂಡಂತೆ ಸುಮಾರು 40 ತುರ್ತು ಚಿಕಿತ್ಸಾ ಸಾಮಗ್ರಿಗಳು ಹಾಗೂ 53 ಪ್ರಕಾರದ ಔಷಧಗಳು ಲಭ್ಯವಿವೆ.
ತುರ್ತು ಚಿಕಿತ್ಸೆಯಲ್ಲಿ ತರಬೇತಿ ಹೊಂದಿದ ಹಾಗೂ ತುರ್ತು ಸ್ಥಿತಿಗಳನ್ನು ನಿಭಾಯಿಸುವ ವಿಶೇಷ ಕೌಶಲ್ಯ (ಇಎಂಟಿ)ವುಳ್ಳ 40 ಜನ ಸಿಬ್ಬಂದಿ ಇದರ ಚಾಲನೆ ಮತ್ತು ನಿರ್ವಹಣೆ ಮಾಡಲಿದ್ದಾರೆ. ಉಪಕರಣಗಳು ಮತ್ತು ಬೈಕ್ ಸೇರಿ ಆಂಬುಲೆನ್ಸ್ ಸುಮಾರು ತಲಾ 2 ಲಕ್ಷ ರೂ. ತಗುಲಲಿದೆ.
ಅಪಘಾತ ನಡೆದ ಅರ್ಧಗಂಟೆ ಅವಧಿಯನ್ನು "ಗೋಲ್ಡನ್ ಅವರ್' ಎಂದು ಹೇಳಿದರೆ, ಆ ಪೈಕಿ ಮೊದಲ ಹತ್ತು ನಿಮಿಷ "ಪ್ಲಾಟಿನಂ 10 ಮಿನಟ್ಸ್' ಎಂದು ಪರಿಗಣಿಸಲಾಗುತ್ತದೆ. ಆ ಹತ್ತು ನಿಮಿಷದಲ್ಲೇ ನೂತನ ಬೈಕ್ ಆಂಬುಲೆನ್ಸ್ ಘಟನಾ ಸ್ಥಳದಲ್ಲಿ ಹಾಜರಾಗಲಿದೆ. ಪ್ರಸ್ತುತ ಈಗಿರುವ 715 "ಆರೋಗ್ಯ ಕವಚ' ಆಂಬುಲೆನ್ಸ್ ಗಳು ನಿಗದಿತ ಸ್ಥಳ ತಲುಪಲು ತೆಗೆದುಕೊಳ್ಳುವ ಸಮಯ ಕನಿಷ್ಠ 20ರಿಂದ 30 ನಿಮಿಷ.
ಮಹಾನಗರಗಳ "ಹಾಟ್ ಸ್ಪಾಟ್' (ಅಪಘಾತ ಸ್ಥಳ)ಗಳನ್ನು ಗುರುತಿಸಲಾಗಿದೆ. ಅವುಗಳ ಆಸುಪಾಸು ಈ ಬೈಕ್ ಆಂಬುಲೆನ್ಸ್ ಗಳು ಇರುತ್ತವೆ. ಘಟನೆ ನಡೆದ ತಕ್ಷಣ ಹಿಂದಿನಂತೆಯೇ ನಾಗರಿಕರು ಉಚಿತ ದೂರವಾಣಿ ’108'ಗೆ ಕರೆ ಮಾಡಿದರೆ ಸಾಕು.
ಪ್ರಾಯೋಗಿಕವಾಗಿ ಆರಂಭಿಸಿದ ಈ ’ಬೈಕ್ ಆಂಬುಲೆನ್ಸ್'ಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಅತ್ಯಾಧುನಿಕಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಬೈಕ್ ಆಂಬುಲೆನ್ಸ್ ಗಳಿಗೆ ಜಿಪಿಎಸ್ ಹಾಗೂ ಇನ್ನಷ್ಟು ಉಪಕರಣಗಳನ್ನು ಅಳವಡಿಸಲಾಗುತ್ತಿದೆ.