ಅಸ್ಸಾಂ : 'ಕಾರು ಕಳ್ಳ' ಅನಿಲ್ ಚೌಹಾಣ್ ನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ, ಅಸ್ಸಾಂನ ಕಾಂಗ್ರೆಸ್ ಶಾಸಕಿ ರುಮಿನಾಥ್ ಅವರನ್ನು ಬಂಧಿಸಲಾಗಿದೆ.
ಅಶೋಕ್ ಚೌಹಾಣ್, ದೆಹಲಿ ಹಾಗೂ ಮುಂಬೈಗಳಲ್ಲಿ ನಡೆಯುತ್ತಿರುವ ಕಳ್ಳತನ ದಂಧೆಯ ಮುಖ್ಯಸ್ಥನಾಗಿದ್ದಾನೆ. ಈತನೊಂದಿಗೆ ಸಂಪರ್ಕ ಹೊಂದಿರುವ ಶಾಸಕಿ ರುಮಿನಾಥ್ ಅವರನ್ನು ಏ.14ರಂದು ಬಂಧಿಸಲಾಗಿದೆ ಎಂದು ಅಸ್ಸಾಂ ನ ಸಹಾಯಕ ಆಯುಕ್ತ ಲಾಲ್ ಬರುವಾ ಹೇಳಿದ್ದಾರೆ. ಇತ್ತೀಚಿನ ವರದಿ ಪ್ರಕಾರ ಆಕೆಯನ್ನು ಕೋರ್ಟ್ ಎದುರು ಹಾಜರುಪಡಿಸಲಾಗಿದೆ.
ಕ್ರಿಮಿನಲ್ ಸಂಚು, ವಂಚನೆ ಮತ್ತು ಅಪರಾಧಿಗೆ ಆಶ್ರಯ ನೀಡಿದ ಆರೋಪದಡಿ, ಐಪಿಸಿ ಸೆಕ್ಷನ್ 120(ಬಿ) 420, 212 ಪ್ರಕಾರ ರುಮಿನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕಿ, ಕಾರು ಕಳ್ಳನೊಂದಿಗೆ ತನಗೆ ಸಂಪರ್ಕವಿಲ್ಲ, ಆದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿರುವ ಆತನ ಪತ್ನಿ ಪರಿಚಯ ಇರುವುದಾಗಿ ತಿಳಿಸಿದ್ದಾರೆ. ತಮ್ಮ ರಾಜಕೀಯ ವರ್ಚಸ್ಸನ್ನು ಹಾಳುಗೆಡವಲು ಇಂತಹ ಆರೋಪ ಹೊರಿಸಲಾಗಿದೆ ಎಂದು ರುಮಿನಾಥ್ ಹೇಳಿದ್ದಾರೆ.
ಗುವಾಹಟಿ ಹೈಕೋರ್ಟ್ ಶಾಸಕಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಕಾರು ಕಳ್ಳತನದಲ್ಲಿ ಭಾಗಿಯಾಗಿದ್ದ ತನ್ನ ಎರಡನೇ ಪತಿ ಜ್ಯಾಕಿ ಜಾಕಿರ್ ಬಂಧನದ ಬೆನ್ನಲ್ಲೇ ಶಾಸಕಿ ರುಮಿನಾಥ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಕಾರು ಕಳ್ಳತನ ಪ್ರಕರಣಗಳಲ್ಲಿ ಅಶೋಕ್ ಚೌಹಾಣ್, ಹಾಗೂ ಜಾಕಿರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.