ನವದೆಹಲಿ : ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವುದನ್ನು ವಿರೋಧಿಸುತ್ತಿರುವ ಕೆಲವು ನಾಯಕರಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿ ಪಕ್ಷದ ನಾಯಕತ್ವದ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚನೆ ನೀಡಿದೆ.
ಬದಲಾವಣೆ ಜೀವನದ ನಿಯಮ. ಹಾಗೆಯೆ ಸಂಸ್ಥೆ ಕೂಡ ಬದಲಾಗುತ್ತದೆ ಹಾಗು ಕ್ರಮವಾಗಿ ಬೆಳವಣಿಗೆಯಾಗುತ್ತದೆ. ಯಾರಿಗಾದರೂ ತಮ್ಮ ಅಭಿಪ್ರಾಯ ಸೂಚಿಸುವುದಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಜೋಯ್ ಕುಮಾರ್ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ಪಕ್ಷದ ಕಾರ್ಯಕಾರಿಣಿ ಸಮಿತಿಯ ಸೂಚನೆಯಂತೆ ಬದಲಾವಣೆಗಳಾಗುತ್ತವೆ. ಪಕ್ಷದ ಸಂವಿಧಾನದಂತೆ ಸರಿಯಾದ ಕಾರ್ಯಸೂಚಿಯೊಡನೆ ಇದು ನಡೆಯುತ್ತದೆ ಎಂದಿದ್ದಾರೆ.
ಸೋನಿಯಾ ಮತ್ತು ರಾಹುಲ್ ಇಬ್ಬರೂ ನಮ್ಮ ನಾಯಕರು. ಕಷ್ಟದ ಸನ್ನಿವೇಶದಲ್ಲಿ ಇಬ್ಬರೂ ಪಕ್ಷವನ್ನು ಮುನ್ನಡೆಸಿದ್ದಾರೆ. ಯಾವುದೇ ಸಂಸ್ಥೆಯಲ್ಲಾದರು ಬದಲಾವಣೆ ಸಹಜ. ಆ ಬದಲಾವಣೆಗಳು ಬಂದಾಗ ಸೋನಿಯಾ ಗಾಂಧಿ ಅವರ ನಾಯಕತ್ವದಡಿ ಹಾಗೂ ಕಾರ್ಯಕಾರಿಣಿ ಸಮಿತಿಯ ಸಲಹೆಗಳೊಂದಿಗೆ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಅಮರಿಂದರ್ ಸಿಂಗ್, ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಹಾಗು ಪಕ್ಷದ ವಕ್ತಾರ ಸಂದೀಪ್ ದೀಕ್ಷಿತ್ ಸೋನಿಯಾ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕೆಂದು ಆಗ್ರಹಿಸಿದ್ದಾರೆ.