BW News Bureau : ಬಿಬಿಎಂಪಿ ವಿಭಜನೆಗೆ ಸುಗ್ರೀವಾಜ್ನೆ ಹೊರಡಿಸಿ ಬಿಬಿಎಂಪಿ ಚುನಾವಣೆ ಮುಂದೂಡಿಕೆಗೆ ಹವಣಿಸುತ್ತಿದ್ದ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ವಾಜುಭಾಯಿ ವಾಲ ಬ್ರೇಕ್ ಹಾಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಆರಂಭಿಕ ಹಂತದಲ್ಲಿಯೇ ಹಿನ್ನಡೆಯಾಗಿದೆ.
ವಿಭಜನೆ ಸಂಬಂಧ ಸರ್ಕಾರ ಹೊರಡಿಸಿದ ಸುಗ್ರೀವಾಜ್ನೆಯಲ್ಲಿ ಕೆಲ ಗೊಂದಲಗಳಿವೆ. ಸ್ಥಳೀಯ ಸಂಸ್ಥೆಗಳ ಕಾಯ್ದೆ ತಿದ್ದುಪಡಿ ಮಾಡದೇ ವಿಭಜನೆ ಪ್ರಸ್ತಾಪ ಸಲ್ಲಿಸಿದ್ದೇಕೆ? ಎಂಬ ಬಗ್ಗೆ ಮಾಹಿತಿ ನೀಡು ವಂತೆ ರಾಜ್ಯಪಾಲ ವಾಜುಭಾಯಿ ರೂಢಾಬಾಯಿ ವಾಲಾ ಸರ್ಕಾರದಿಂದ ಸ್ಪಷ್ಟೀಕರಣ ಕೇಳಿದ್ದಾರೆ. ಇದರೊಂದಿಗೆ ಸರ್ಕಾರ ಮತ್ತು ರಾಜಭವನದ ಮಧ್ಯೆ ಇನ್ನೊಂದು ಹಗ್ಗಜಗ್ಗಾಟ ಆರಂಭಗೊಂಡಿದೆ.
ಸರ್ಕಾರ ಸುಗ್ರೀವಾಜ್ನೆ ಹೊರಡಿಸಿರುವುದರಿಂದ ರಾಜ್ಯಪಾಲರು ಬೆಂಗಳೂರು ಮಹಾನಗರ ಪಾಲಿಕೆಯನ್ನು ಮೂರು ವಿಭಜನೆ ಮಾಡುವುದಕ್ಕೆ ಒಪ್ಪಿಗೆ ನೀಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರದ ಶಾಸಕರು, ಸಚಿವರು ಭಾವಿಸಿದ್ದರು. ಇದಕ್ಕೆ ಸಕಾರಣವೂ ಇತ್ತು. ಸಾಮಾನ್ಯವಾಗಿ ಸಂಪುಟ ಅಂಗೀಕರಿಸಿದ ಸುಗ್ರೀವಾಜ್ಞೆಗೆ ವಿಧೇಯಕದ ಸ್ಥಾನಮಾನ ಇರುತ್ತದೆ. ವಿಧಾನ ಮಂಡಲದ ಅಧಿವೇಶನ ಮುಕ್ತಾಯಗೊಂಡ ಸಂದರ್ಭದಲ್ಲಿ ಸಾರ್ವಜನಿಕ ಜರೂರತ್ತಿನ ಸಂಗತಿ ಸೃಷ್ಟಿಯಾದಾಗ ಸರ್ಕಾರ ಸಾಮಾನ್ಯವಾಗಿ ಸುಗ್ರೀವಾಜ್ಞೆ ಹೊರಡಿಸುತ್ತದೆ. ಮಾತ್ರವಲ್ಲ ಮುಂದಿನ 6 ತಿಂಗಳ ಅವಧಿಯಲ್ಲಿ ಅದಕ್ಕೆ ವಿಧೇಯಕದ ರೂಪ ನೀಡಲಾಗುತ್ತದೆ.
ಹೀಗಾಗಿ ಈಗ ಹೊರಡಿಸುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ನೀಡುತ್ತಾರೆ. ಆ ಮೂಲಕ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಭಯವನ್ನು ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳಲು ಸರ್ಕಾರ ಮುಂದಾಗಿತ್ತು. ಆದರೆ ಬೆಂಗಳೂರು ವಿಭಜನೆ ಸುಗ್ರೀವಾಜ್ನೆಯಲ್ಲಿ ಮುಕ್ತಾಯವಾಗುವ ವಿಷಯವಲ್ಲ. ಈ ಬಗ್ಗೆ ಉಭಯ ಸದನದಲ್ಲಿ, ಸಾರ್ವಜನಿಕವಾಗಿ ಚರ್ಚೆಯಾಗಬೇಕು.
ವಿಭಜನೆಯ ಮತ್ತು ಆಡಳಿತಾತ್ಮಕ ಪರಿಣಾಮದ ಬಗ್ಗೆ ಚಿಂತನೆಯಾಗಬೇಕು ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿ ಸುಗ್ರೀವಾಜ್ಞೆಗೆ ಅಂಗೀಕಾರ ನೀಡುವುದಾಗಿ ರಾಜ್ಯಪಾಲರು ಸರ್ಕಾರದ ನಿಯೋಗಕ್ಕೆ ತಿಳಿಸಿದ್ದರು. ಆದರೆ ರಾಜ್ಯಪಾಲರು ಸರ್ಕಾರವನ್ನೇ ವಿವರಣೆ ಕೇಳಿರುವುದು ಈಗ ಹಿನ್ನಡೆ ತಂದಿದೆ.