ನವದೆಹಲಿ : ಫ್ರಾನ್ಸ್ ನೊಂದಿಗೆ ರಫೆಲ್ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅವರದ್ದೇ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ತಿರುಗಿಬಿದ್ದಿದ್ದಾರೆ.
ಈಗಾಗಲೇ ಲಿಬಿಯಾ ಮತ್ತು ಈಜಿಪ್ಟ್ನಲ್ಲಿ ರಫೆಲ್ ವಿಮಾನಗಳ ಕಳಪೆ ಗುಣಮಟ್ಟ ಸಾಬೀತಾಗಿದೆ. ಹಲವು ರಾಷ್ಟ್ರಗಳು, ರಫೆಲ್ ಯುದ್ಧ ವಿಮಾನ ಖರೀದಿಗೆ ಮಾಡಿಕೊಂಡಿದ್ದ ಒಪ್ಪಂದ ರದ್ದುಗೊಳಿಸಲು ನಿರ್ಧರಿಸಿವೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರ ಅದೇ ವಿಮಾನ ಖರೀದಿಗೆ ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಹೀಗಾಗಿ ವಿಮಾನ ಖರೀದಿ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವುದಾಗಿ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ರಫೆಲ್ ವಿಮಾನಗಳ ಇಂಧನ ಸಾಮರ್ಥ್ಯ ಅತ್ಯಂತ ಕಡಿಮೆ ಇದೆ. ಅವುಗಳ ವಿಶ್ವಾಸಾರ್ಹತೆಯೂ ಉತ್ತಮವಾಗಿಲ್ಲ. ಒಂದು ವೇಳೆ ಶೀಘ್ರವೇ ಯಾವುದಾದರೂ ದೇಶ ವಿಮಾನ ಖರೀದಿ ಮಾಡದೇ ಹೋದಲ್ಲಿ ಕಂಪನಿಯೇ ಮುಚ್ಚಿ ಹೋಗುವ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಯಾವ ಒತ್ತಡಕ್ಕೆ ಒಳಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ಖರೀದಿಗೆ ಮುಂದಾಗಿದ್ದಾರೋ ಗೊತ್ತಿಲ್ಲ. ಭಾರತ ಸರ್ಕಾರ ವಿಮಾನ ಖರೀದಿಯ ಬದಲು, ವಿಮಾನ ನಿರ್ಮಾಣ ಕಂಪನಿಯನ್ನೇ ಖರೀದಿಸಿದ್ದರೆ, ಒಂದಿಷ್ಟಾದರೂ ಒಳ್ಳೆಯದಾಗುತಿತ್ತು ಎಂದು ಸ್ವಾಮಿ ವ್ಯಂಗ್ಯವಾಡಿದ್ದಾರೆ.