ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮಾದರಿಯ ಆಡಳಿತಕ್ಕಿಂತ ನನ್ನ ಮಾದರಿಯ ಆಡಳಿತವೇ ಉತ್ತಮವೆಂದು ಹೇಳುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರದ್ದು ವ್ಯಕ್ತಿ ಕೇಂದ್ರಿತ ಆಡಳಿತ ಮಾದರಿಯಾದರೆ ತನ್ನದು ಜನಕೇಂದ್ರಿತ ಆಡಳಿತ ಮಾದರಿ ಆಗಿದೆ ಎಂದು ಕೇಜ್ರಿವಾಲ್ ಸಮರ್ಥಿಸಿಕೊಂಡದ್ದಾರೆ.
ಆಮ್ ಆದ್ಮಿ ಪಕ್ಷದೊಳಗಿನ ಜಗಳಗಳಿಗೆ ತಾವು ಯಾವುದೇ ಮಹತ್ವ ನೀಡುತ್ತಿಲ್ಲ ಮತ್ತು ಅವುಗಳಿಂದ ಒಂದಿನಿತೂ ತಲೆ ಕೆಡಿಸಿಕೊಳ್ಳುತ್ತಿಲ್ಲ; ಬದಲಾಗಿ ತಾವು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಜನಾನುಕೂಲಿ ವ್ಯವಸ್ಥೆಯನ್ನಾಗಿ ಪರಿವರ್ತಿಸುವುದಕ್ಕೆ ಮಹತ್ವ ನೀಡುತ್ತಿದ್ದೇನೆ. ಆಡಳಿತದ ಎಲ್ಲ ಸ್ತರಗಳಲ್ಲಿ ಅಂತಗರ್ತವಾಗಿರುವ ಭ್ರಷ್ಟಾಚಾರವನ್ನು ತೊಡೆದು ಹಾಕುವುದಕ್ಕಾಗಿ ತನ್ನದು ಅಧಿಕಾರಶಾಹಿ ಶುದ್ಧೀಕರಣದ ಹೋರಾಟವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಹಿಂದೆ ಪತ್ರಕರ್ತರಾಗಿದ್ದು ಈಗ ಆಮ್ ಆದ್ಮಿ ಪಕ್ಷದ ಉನ್ನತ ನಾಯಕರಲ್ಲಿ ಓರ್ವರಾಗಿರುವ ಆಶುತೋಷ್ ಅವರ "ದ ಕ್ರೌನ್ ಪ್ರಿನ್ಸ್, ದ ಗ್ಲೆಡಿಯೇಟರ್ ಆಂಡ್ ದಿ ಹೋಪ್' ಎನ್ನುವ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಕೇಜ್ರಿವಾಲ್, ದೆಹಲಿಯಲ್ಲಿ ಜನರು ಆಪ್ ಗೆ 67 ಸ್ಥಾನಗಳನ್ನು ಜಯಿಸಿ ಕೊಡುವ ಮೂಲಕ ಕೇಜ್ರಿವಾಲ್ ಮಾದರಿಯ ಸರಕಾರದ ಮೇಲೆ ದೃಢವಾದ ವಿಶ್ವಾಸವನ್ನು ಇರಿಸಿದ್ದಾರೆ; ನಾನು ಅವರಿಗೆ ಚಿರ ಋಣಿಯಾಗಿದ್ದೇನೆ ಎಂದು ಹೇಳಿದರು.