ಬಾಗಲಕೋಟೆ : ಗೋ ಮಾಂಸ ಸೇವನೆ ವಿಚಾರ ಅವರವರ ವಿವೇಚನೆಗೆ ಬಿಟ್ಟದ್ದು, ನಮ್ಮಲ್ಲಿ ಗೋಹತ್ಯೆ ನಿಷೇಧ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಯಡಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಮಾಂಸ ತಿನ್ನುವವರು, ಗೋ ಮಾಂಸ ತಿನ್ನಲಿ, ಕುರಿ ಮಾಂಸ ತಿನ್ನುವವರು ಕುರಿ ಮಾಂಸ ತಿನ್ನಲಿ ಮಾಂಸ ಸೇವನೆ ಅವರವರ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ಹಾಗಾಗಿ ಅದರ ಬಗ್ಗೆ ವಾದ ಬೇಡ. ಗೋ ಹತ್ಯೆ ನಿಷೇಧ ಮಾಡುವ ಚಿಂತನೆ ನಮ್ಮ ಮುಂದೆ ಇಲ್ಲ ಎಂದರು. ಬೆಂಗಳೂರಿನ ಟೌನ್ಹಾಲ್ ಬಳಿ ನಡೆದ ವೈವಿದ್ಯಮಯ ಆಹಾರ ಪದ್ಧತಿ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು
ಗೋ ಮಾಂಸ ಹಂಚಿದ ಬಗ್ಗೆ ಕೇಳಿದ ಪ್ರಶ್ನೆಗೆ ಹೀಗೆಂದು ಉತ್ತರಿಸಿದ್ದಾರೆ.
ಇದೇ ವೇಳೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವ ಬೇಡಿಕೆ ಇಡುವವರು ಮೂರ್ಖರು ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಯಾವ ಕಾರಣಕ್ಕೂ ಉತ್ತರ ಕರ್ನಾಟಕವನ್ನು ಒಡೆಯುವುದಿಲ್ಲ. ಅಖಂಡ ಕರ್ನಾಟಕ ನಮ್ಮ ಉದ್ದೇಶ ಎಂದು ಅವರು ಉಮೇಶ್ ಕತ್ತಿ ಹೇಳಿಕೆಗೆ ತಿರುಗೇಟು ನೀಡಿದರು.