Sullia : ಮಕ್ಕಳಿಗೆ ಪುಸ್ತಕ ರಹಿತ ಎಂದರೆ ಬಹಳ ಖುಷಿ. ಅದು ಇಂತಹ ಬೇಸಿಗೆ ಶಿಬಿರಗಳಲ್ಲಿ ಸಿಗುತ್ತದೆ. ಅವರೊಳಗಿನ ಸೃಜನಶೀಲತೆಯು ಅನಾವರಣವಾಗುವುದು ಇಲ್ಲೇ. ಮನರಂಜನೆಯೊಂದಿಗೆ ಬೌದ್ಧಿಕ ಚಟುವಟಿಕೆಗಳೂ ಇದ್ದಾಗ ಅದು ಮಕ್ಕಳಿಗೆ ಪ್ರಯೋಜನಕಾರಿಯಾಗುತ್ತದೆ ಎಂದು ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಶೀಲಾ ಜಿ ನಾಯಕ್ ರವರು ಹೇಳಿದರು.
ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಭಾಷಣ ಮಾಡಿದರು. ಇನ್ನೊರ್ವ ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆಂಪಲಿಂಗಪ್ಪ ಇವರು ಮಾತನಾಡಿ 'ಸಮಾಜದಲ್ಲಿ ಬೆರೆಯುವಿಕೆ ಮತ್ತು ನಡವಳಿಕೆಯನ್ನು ಇಂತಹ ಬೇಸಿಗೆ ಶಿಬಿರಗಳು ಕಲಿಸುತ್ತವೆ' ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆಯವರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ ಶಿಬಿರದ ಸಂಚಾಲಕರಾದ ಪ್ರಸನ್ನ ಐವರ್ನಾಡು ವಂದಿಸಿದರು.
ಶಿಬಿರದ ಕುರಿತು ಶಿಬಿರಾರ್ಥಿಗಳಾದ ಕುಮಾರಿ ಅಲಕನಂದಾ ಮತ್ತು ಪೃಥ್ವಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿಬಿರದಲ್ಲಿ ತಯಾರಾದ ವಿವಿಧ ಸಾಂಸ್ಕೃತಿಕ ವೈಭವಗಳನ್ನು ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಯಿತು. ಶಿಬಿರದಲ್ಲಿ ಪೇಪರ್ ಕ್ರಾಪ್ಟ್, ಮೋಜಿನಗಣಿತ, ಮೈಂಡ್ಗೇಮ್ಸ್, ಸರಳವಿಜ್ಞಾನ, ಕಥಾಸಮಯ, ನೃತ್ಯ, ನಾಟಕ, ಔಷಧಿಸಸ್ಯಗಳ ಪರಿಚಯವನ್ನು ಆಯೋಜಿಸಲಾಗಿತ್ತು.