ಚೆನ್ನೈ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಪೊಲೀಸರು ನಡೆಸಿರುವ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ರಕ್ತ ಚಂದನ ಮರಗಳನ್ನು ಕದಿಯುತ್ತಿದ್ದ ತಮಿಳುನಾಡು ಮೂಲದ 150 ಮಂದಿಯ ಪೈಕಿ 20 ಮಂದಿ ಕಳ್ಳ ಸಾಗಣೆದಾರರನ್ನು ಪೊಲೀಸರು ಎನ್ ಕೌಂಟರ್ ಮಾಡಿ ಹತ್ಯೆಗೈದಿದ್ದರು. ಉಳಿದವರು ದಟ್ಟ ಕಾಡಿನಲ್ಲಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಈ ನಡುವೆ ಆಂಧ್ರಪ್ರದೇಶ ಪೊಲೀಸರ ಎನ್ ಕೌಂಟರ್ ವಿರುದ್ಧ ತಮಿಳುನಾಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಆತುರದ ನಿರ್ಧಾರ ಎಂದು ಕಿಡಿಕಾರಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆ ತಮಿಳ್ ಇಸೈ ಸೌಂದರ್ ರಾಜನ್ ಅವರು, 150ಕ್ಕೂ ಹೆಚ್ಚು ಮಂದಿ ಇದ್ದ ಕೂಲಿಕಾರ್ಮಿಕರ ತಂಡದ ಮೇಲೆ ಆಂಧ್ರ ಪ್ರದೇಶ ಪೊಲೀಸರು ಏಕಾಏಕಿ ಗುಂಡು ಹಾರಿಸಬಾರದಾಗಿತ್ತು. ಅವರನ್ನು ಬಂಧಿಸಿ ವಿಚಾರಣೆ ನಡೆಸಬಹುದಾಗಿತ್ತು. ಆದರೆ ಪೊಲೀಸರು ಹಿಂದುಮುಂದು ನೋಡದೇ ಎನ್ ಕೌಂಟರ್ ಮಾಡಿ ಅಮಾಯಕ ಕೂಲಿ ಕಾರ್ಮಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರು ನಿಜವಾಗಿಯೂ ಸ್ಮಗ್ಲರ್ ಗಳೇ ಆದರೂ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಾಗಿತ್ತು. ಅಷ್ಟು ದೊಡ್ಡ ಗುಂಪು ಬಹಿರಂಗವಾಗಿ ಕಳ್ಳಸಾಗಣೆ ಮಾಡಲು ಸಾಧ್ಯವೇ ಎಂಬ ಕನಿಷ್ಠ ಯೋಚನೆ ಮಾಡದೇ ಪೊಲೀಸರು ಆತುರದ ನಿರ್ಧಾರ ಕೈಗೊಂಡಿದ್ದಾರೆ. ಘಟನೆಯಲ್ಲಿ ತಮಿಳುನಾಡು ಮೂಲದ 12 ಮಂದಿ ಅಮಾಯಕ ಕೂಲಿ ಕಾರ್ಮಿಕರನ್ನು ಕೊಂದುಹಾಕಿದ್ದಾರೆ. ಈ ದೌರ್ಜನ್ಯದ ವಿರುದ್ಧ ಕೂಡಲೇ ಆಂಧ್ರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಆಂಧ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆಗ್ರಹಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು ಕೂಡ ಆಂಧ್ರ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.