ನವದೆಹಲಿ : 'ಮುಸ್ಲಿಮ್ ಸಮುದಾಯ'ದ ನಾಯಕರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಭಯೋತ್ಪಾದನೆ ಹಾಗೂ ಯುವಕರಲ್ಲಿ ಹೆಚ್ಚುತ್ತಿರುವ ತೀವ್ರಗಾಮಿತನದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಭಯೋತ್ಪಾದನೆ ಹಾಗೂ ಯುವಕರಲ್ಲಿ ಕಂಡುಬರುತ್ತಿರುವ ಭಯೋತ್ಪಾದಕ ಪ್ರವೃತ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಸ್ಲಿಮ್ ಸಮುದಾಯದ ನಾಯಕರ ನಿಯೋಗ, ಮುಸ್ಲಿಂ ಯುವಕರಿಗೆ ಉತ್ತಮ ಶಿಕ್ಷಣ ಮತ್ತು ಅನುಕೂಲತೆಗಳನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ದೇಶದ ಭದ್ರತೆ, ಆರ್ಥಿಕ ಬೆಳವಣಿಗೆ ಹಾಗೂ ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ತಮ್ಮ ಸಮುದಾಯ ಸಹಕಾರ ನೀಡಲಿದೆ ಎಂದು ಮುಸ್ಲಿಮ್ ನಿಯೋಗದ ನಾಯಕರು ಭರವಸೆ ನೀಡಿದ್ದಾರೆ. ಇನ್ನು ಪ್ರಧಾನಿ ಮೋದಿ ಸಹ, ಮುಸ್ಲಿಂ ಸಮುದಾಯಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಹಾಗೂ ಸಮುದಾಯ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ನಿಯೋಗದಲ್ಲಿದ್ದ ಬಹುತೇಕ ಮುಸ್ಲಿಂ ನಾಯಕರು ಉತ್ತರಪ್ರದೇಶದವರಾಗಿದ್ದಾರೆ. ನರೇಂದ್ರ ಮೋದಿ ಸರ್ಕಾರ ಹಿಂದುತ್ವದ ಪರ ಧೋರಣೆ ಹೊಂದಿದೆ ಎಂದು ಅಪಪ್ರಚಾರ ಮಾಡಿದ್ದರಿಂದ ಮುಸ್ಲಿಮ್ ಸಮುದಾಯದಲ್ಲಿ ಆತಂಕ ಸೃಷ್ಠಿಯಾಗಿತ್ತು ಎಂದು ಹೇಳಲಾಗಿತ್ತು. ಆದರೆ ಈ ಭೇಟಿಯ ಮೂಲಕ ಮುಸ್ಲಿಂ ಸಮುದಾಯದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಆತಂಕವಿದೆ ಎಂಬ ವದಂತಿಗಳು ಸಂಪೂರ್ಣ ಸುಳ್ಳೆಂದು ಸಾಬೀತಾಗಿದೆ.