ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿ ಮೇಲೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಭಾರೀ ಪ್ರಮಾಣದ ಆತ್ಮಾಹುತಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿವೆ.
ಪಾಕ್ ಮೂಲದ ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆಯ ನೇತೃತ್ವದಲ್ಲಿ ದೆಹಲಿಯ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಲಾಗಿದೆ. ಇತ್ತೀಚೆಗೆ ಜಮ್ಮು-ಕಾಶ್ಮೀರದ ಸಾಂಬಾ ಪೊಲೀಸ್ ಠಾಣೆ ಮೇಲೆ ನಡೆಸಿದ ಮಾದರಿಯಲ್ಲೇ ದೆಹಲಿಯಲ್ಲೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಈ ಹಿಂದೆ ಅಂದರೆ 2001ರಲ್ಲಿ ಜೈಷ್ ಎ ಮಹಮ್ಮದ್ ಸಂಘಟನೆ ಸಂಸತ್ತಿನ ಮೇಲೆ ದಾಳಿ ನಡೆಸಿ ಹಲವರನ್ನು ಬಲಿ ಪಡೆದಿತ್ತು.ವಿಶೇಷವೆಂದರೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವರಿಗೆ ನೀಡಲಾಗಿದ್ದ ಭದ್ರತೆಯನ್ನು ಹೆಚ್ಚಿಸಿದ ಬೆನ್ನಲ್ಲೇ, ಗುಪ್ತಚರ ಸಂಸ್ಥೆಗಳು ಇಂಥದ್ದೊಂದು ಮುನ್ನೆಚ್ಚರಿಕೆ ನೀಡಿವೆ.
ಅಲ್ಲದೇ ಕಾಶ್ಮೀರದಲ್ಲಿರುವ ಸಿಪಿಎಂ ಕಾರ್ಯಕರ್ತರ ಮೇಲೂ ದಾಳಿ ನಡೆಸಲು ಜೈಷ್ ಯೋಜನೆ ರೂಪಿಸಿದ್ದು, ಅದರಲ್ಲೂ ನಿರ್ದಿಷ್ಟವಾಗಿ ಕುಲ್ಗಾಮ್ ಜಿಲ್ಲೆಯಲ್ಲಿರುವ ಕಾರ್ಯಕರ್ತರ ಮೇಲೆ ದಾಳಿ ನಡೆಸಲು ಹಾತೊರೆಯುತ್ತಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.