ನವದೆಹಲಿ : ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ವರ್ಣಭೇದ ಹೇಳಿಕೆ ವಿರುದ್ಧ ದೇಶದ ಎಲ್ಲೆಡೆ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, "ಗಿರಿರಾಜ್ ಸಿಂಗ್ ಅತ್ಯಾಚಾರಿಗಿಂತ ಕೀಳು' ಎಂದು ವಿವಾದಿತ ನಿರ್ಭಯಾ ಸಾಕ್ಷ್ಯಚಿತ್ರ ನಿರ್ದೇಶಕಿ ಲೆಸ್ಲಿ ಉಡ್ವಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಸಾಕ್ಷ್ಯಚಿತ್ರ ಅತ್ಯಾಚಾರಿಗಳಿಗೆ ಉತ್ತೇಜನ ನೀಡುವಂತಿದೆ ಎಂದು ಹೇಳಿದ ಭಾರತೀಯ ಸಂಸತ್ತು, ಹಲವಾರು ವರ್ಷಳಿಂದ ಏಕೆ ಇಂಥ ಸ್ತ್ರೀ ವಿರೋಧಿ ರಾಜಕಾರಣಿಗಳಿಗೆ ಅಧಿಕಾರ ನೀಡಿ ಸ್ತ್ರೀದ್ವೇಷಿ ಹೇಳಿಕೆ ನೀಡಲು ಉತ್ತೇಜಿಸುತ್ತಿದೆ? ರಾಜಕಾರಣಿಗಳ ಇಂಥ ಬೂಟಾಟಿಕೆ ನನ್ನನ್ನು ಘಾಸಿಗೊಳಿಸಿದೆ' ಎಂದು ಉಡ್ವಿನ್ ಪ್ರತಿಕ್ರಿಯಿಸಿದ್ದಾರೆ.
ನಾನು ಒಬ್ಬ ಅತ್ಯಾಚಾರಿಯ ಸಂದರ್ಶನ ಮಾಡಿದ್ದಕ್ಕಾಗಿ ನನ್ನ ಮೇಲೆ ಇಡೀ ಸಂಸತ್ತು ದಾಳಿ ನಡೆಸಿತ್ತು. ಇಂಥ ಸ್ತ್ರೀವಿರೋಧಿ ಹೇಳಿಕೆ ನೀಡುವ ರಾಜಕಾರಣಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಮೊದಲು ಕಿತ್ತೂಗೆಯಬೇಕು ಎಂದು ಹೇಳಿದ್ದಾರೆ.