ನವದೆಹಲಿ : ಯುದ್ಧಪೀಡಿತ ಯೆಮೆನ್ ನಲ್ಲಿ ಸಿಲುಕಿರುವ 4 ಸಾವಿರ ಭಾರತೀಯರನ್ನು ರಕ್ಷಿಸಿ, ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ 'ಆಪರೇಷನ್ ರಾಹತ್' ಆರಂಭಿಸಿದ್ದು, ಮೊದಲ ಹಂತದಲ್ಲಿ 22 ಕನ್ನಡಿಗರೂ ಸೇರಿದಂತೆ 349 ಜನರನ್ನು ರಕ್ಷಿಸಲಾಗಿದೆ.
ಮೊದಲ ಹಂತದ ಕಾರ್ಯಾಚರಣೆಯಲ್ಲಿ ಯೆಮೆನ್ ನ ಏಡನ್ ಪಟ್ಟಣದಿಂದ 349 ಭಾರತೀಯರನ್ನು ಗಸ್ತು ನೌಕೆ ಐ.ಎನ್.ಎಸ್ ಸುಮಿತ್ರಾ ಮೂಲಕ ಪಕ್ಕದ ಜಿಬೂತಿ ದೇಶಕ್ಕೆ ಕರೆತರಲಾಯಿತು. ಯೆಮೆನ್ ನಿಂದ ಪಾರಾಗಿ ಬಂದಿರುವ ಭಾರತೀಯರ ಜತೆ ಜಿಬೂತಿಯಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಸಮಾಲೋಚನೆ ನಡೆಸಿದರು. ಬಳಿಕ 349 ಭಾರತೀಯರನ್ನು ಹೊತ್ತ ಎರಡು ವಿಮಾನ ಬುಧವಾರ ರಾತ್ರಿ ಭಾರತಕ್ಕೆ ಬಂದಿಳಿಯಿತು.
ಈ ಪೈಕಿ ಒಂದು ವಿಮಾನ ಕೊಚ್ಚಿಗೆ, ಮತ್ತೂಂದು ವಿಮಾನ ಮುಂಬೈಗೆ ಬಂದು ತಲುಪಿತು. ಈ ನಡುವೆ ಯೆಮೆನ್ ನಿಂದ ಭಾರತೀಯರನ್ನು ಕರೆತರಲು ಕೊಚ್ಚಿಯಿಂದ ತೆರಳಿರುವ ಎರಡು ಪ್ರಯಾಣಿಕ ಹಡಗುಗಳಿಗೆ ಕಡಲ್ಗಳ್ಳರ ಹಾವಳಿ ಇರುವ ಸೋಮಾಲಿಯಾ ಕರಾವಳಿಯಲ್ಲಿ ರಕ್ಷಣೆ ಒದಗಿಸಲು ಮುಂಬೈನಿಂದ ಎರಡು ನೌಕೆಗಳನ್ನು ಕೂಡ ರವಾನಿಸಲಾಗಿದೆ.