: ರಾಜ್ಯ ಹೈಕೋರ್ಟ್ ಆದೇಶದಂತೆ ನಿಗದಿತ ಅವಧಿಯೊಳಗೆ ಬಿಬಿಎಂಪಿ ಚುನಾವಣೆ ನಡೆಸಲಾಗುವುದೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ನಿಗದಿತ ಅವಧಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ. ಚುನಾವಣೆ ಮುಂದೂಡುವ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ. ಬಿಬಿಎಂಪಿಯನ್ನು ವಿಭಜನೆ ಮಾಡುವ ಉದ್ದೇಶವಿತ್ತು ಎಂದರು.
ಹೈಕೋರ್ಟ್ ಆದೇಶವನ್ನು ಪಾಲಿಸುವ ಮೂಲಕ ಸದ್ಯಕ್ಕೆ ಬಿಬಿಎಂಪಿ ವಿಭಜನೆ ಪ್ರಸ್ತಾವವನ್ನು ಕೈಬಿಟ್ಟು ಚುನಾವಣೆ ನಡೆಸುವ ಕಡೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಸ್ ಆರ್ ಟಿಸಿಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಒದಗಿಸಲಾಗಿದೆ. ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ಮಹಿಳಾ ಮೀಸಲಾತಿ ಜಾರಿಗೆ ಬಂದಿತ್ತು ಎಂದರು. ಮಹಿಳೆಯರ ಸ್ವಂತ ಶಕ್ತಿಜತೆ ಮೀಸಲು ಸೌಲಭ್ಯ ಕೂಡ ಅಗತ್ಯ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸಲಾಗುವುದು. ಮಹಿಳೆಯರು ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಕೆಎಸ್ಆರ್ಟಿಸಿಯಲ್ಲಿ ನಿರ್ವಾಹಕ, ಚಾಲಕ, ಮ್ಯಾಕನಿಕ್ ಹುದ್ದೆ ಕೂಡ ಮಹಿಳೆಯರು ನಿರ್ವಹಿಸುತ್ತಿದ್ದಾರೆ. ಒಟ್ಟು 2743 ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಕೆಎಸ್ಆರ್ಟಿಸಿಯಲ್ಲಿ ಅಧಿಕಾರಿ ಸಿಬ್ಬಂದಿ ಸಂಖ್ಯೆ 37,569 ಮಂದಿಯಿದ್ದು, ಇದರಲ್ಲಿ ಶೇ.7.3ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆಂದರು. ರಾತ್ರಿ ತಂಗುವ ಬಸ್ ಗಳಲ್ಲಿ ಮಹಿಳಾ ನಿರ್ವಾಹಕಿಯರನ್ನು ನಿಯೋಜಿಸುವುದಿಲ್ಲ. ಒಂದು ವೇಳೆ ಅಪೇಕ್ಷೆಪಟ್ಟು ಲಿಖಿತ ಮನವಿ ಸಲ್ಲಿಸಿದರೆ ಮಾತ್ರ ರಾತ್ರಿ ಬಸ್ ಗಳು ತಂಗುವ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.