ನವದೆಹಲಿ : ತನ್ನ ಪಕ್ಷದ ನಾಯಕ, ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಮರೆತಿರಬಹುದು, ಆದರೆ ಎನ್.ಡಿ.ಎ ಸರ್ಕಾರ ನವದೆಹಲಿಯಲ್ಲಿ ಪಿ.ವಿ ನರಸಿಂಹ ರಾವ್ ಅವರ ನೆನಪಿನಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿಸಿದೆ.
1991ರಲ್ಲಿ ಪ್ರಧಾನಿಯಾಗಿದ್ದ ಪಿ.ವಿ ನರಸಿಂಹ ರಾವ್ ಅವರು ಆರ್ಥಿಕ ಕುಸಿತದಿಂದ ಭಾರತವನ್ನು ಪಾರು ಮಾಡಿದ್ದರು. ಉತ್ಪಾದನಾ ವಲಯ ಹಾಗೂ ಕೈಗಾರಿಕಾ ನೀತಿ ಸುಧಾರಣೆಯಿಂದ ಭಾರತ ಅತಿ ಕಡಿಮೆ ಸಮಯದಲ್ಲಿ ಆರ್ಥಿಕ ಕುಸಿತದ ಸಮಸ್ಯೆಯಿಂದ ಹೊರಬಂದಿತ್ತು.
ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಭಾರತದ ನಾಯಕತ್ವವನ್ನು ವಹಿಸಿಕೊಂಡು ದೇಶವನ್ನು ಅಭಿವೃಧಿ ಪಡಿಸಿದ ನಾಯಕನನ್ನು ಸ್ಮರಿಸುವ ನಿಟ್ಟಿನಲ್ಲಿ ಎನ್.ಡಿ.ಎ ಸರ್ಕಾರ ಪಿ.ವಿ ನರಸಿಂಹ ರಾವ್ ಸ್ಮಾರಕ ನಿರ್ಮಿಸಲು ತೀರ್ಮಾನಿಸಿದೆ. ಈ ಬಗ್ಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಕಳೆದವಾರ ಸಚಿವ ಸಂಪುಟದ ಒಪ್ಪಿಗೆಗಾಗಿ ಪ್ರಸ್ತಾವನೆಯನ್ನು ಕಳಿಸಿದೆ.
ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದರೆ ಏಕತಾ ಸ್ಥಳ ಸಮಾಧಿ ಕಾಂಪ್ಲೆಕ್ಸ್ ಬಳಿ ಪಿ.ವಿ ನರಸಿಂಹ ರಾವ್ ಅವರ ಸ್ಮಾರಕ ನಿರ್ಮಾಣವಾಗಲಿದೆ. ಇದೇ ಸ್ಥಳದಲ್ಲಿ ಕಾಂಗ್ರೆಸ್ ನಾಯಕರಾದ ಗ್ಯಾನಿ ಜೈಲ್ ಸಿಂಗ್ ಅವರ ಸ್ಮಾರಕವನ್ನೂ ನಿರ್ಮಿಸಲಾಗಿದೆ.
ಕಳೆದ ಅಕ್ಟೋಬರ್ ನಲ್ಲಿ ಆಂಧ್ರಪ್ರದೇಶದ ಆಡಳಿತ ಪಕ್ಷ ಟಿಡಿಪಿ, ಪಿ.ವಿ ನರಸಿಂಹ ರಾವ್ ಅವರ ಸ್ಮಾರಕ ನಿರ್ಮಾಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲೂ ನರಸಿಂಹ ರಾವ್ ಅವರ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ ಒತ್ತಾಯವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಿರಸ್ಕರಿಸಿತ್ತು.
ಕಾಂಗ್ರೆಸ್ ನ ಹೈಕಮಾಂಡ್ ಆಣತಿಯಂತೆ ಪಿ.ವಿ ನರಸಿಂಹ ರಾವ್ ನಿಧನರಾದ ಸಂದರ್ಭದಲ್ಲಿ, ಅವರ ಪಾರ್ಥಿವ ಶರೀರವನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿರಿಸಲು ನಿರಾಕರಿಸಲಾಗಿತ್ತು.