ನವದೆಹಲಿ : ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಮಾಜಿ ಸಿ.ಎಂ ಯಡಿಯೂರಪ್ಪ ಹಾಗೂ ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರರ ವಿರುದ್ಧ ಕ್ರಮ ಕೈಗೊಳ್ಳದಂತೆ ಸ್ವತಃ ಕಾಂಗ್ರೆಸ್ ಪಕ್ಷದವರೇ ತಮಗೆ ಮನವಿ ಮಾಡಿದ್ದರು ಎಂದು ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಮನವಿಯ ಹೊರತಾಗಿಯೂ ಕರ್ತವ್ಯ ಪ್ರಜ್ನೆಯಿಂದ ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರ ವಿರುದ್ಧ ಕ್ರಮ ಕೈಗೊಂಡಿದ್ದೆ ಎಂದು ಹಂಸರಾಜ ಭಾರದ್ವಾಜ್ ಹೇಳಿದ್ದಾರೆ. ಅಲ್ಲದೇ ತಾವು ಕೈಗೊಂಡ ಕ್ರಮದ ಪರಿಣಾಮ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅನುಕೂಲವಾಯಿತು ಎಂದು ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ ಅದಕ್ಕೆ ತಾವು ಯಡಿಯೂರಪ್ಪ, ಹಾಗೂ ರೆಡ್ಡಿ ಸಹೋದರರ ವಿರುದ್ಧ ಕೈಗೊಂಡ ಕ್ರಮವೇ ಕಾರಣ ಎಂದಿರುವ ಮಾಜಿ ರಾಜ್ಯಪಾಲರು, ಕಾಂಗ್ರೆಸ್ಸಿನ ಹಲವು ನಾಯಕರು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಅಲ್ಲದೇ ಅವರೊಂದಿಗೆ ಶಾಮೀಲಾಗಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ಸಿನ ನಾಯಕತ್ವ ಕಾರಣವಲ್ಲ ಎಂದು ಹಂಸರಾಜ ಭಾರದ್ವಾಜ್ ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಅಲ್ಲದೇ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಡೆಸುತ್ತಿದ್ದ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂಬ ಹೇಳಿಕೆಯಿಂದ ಪಕ್ಷ ತಲೆತಗ್ಗಿಸುವಂತೆ ಮಾದಿದೆ.