BW News Bureau : ಬಂಜೆತನ ನಿವಾರಣೆ ಮಾಡುವುದಾಗಿ ಹೇಳಿ ನೂರಾರು ಜನರಿಗೆ ವಂಚಿಸಿದ್ದ ಕೆ.ಟಿ.ಗುರುಮೂರ್ತಿಯ ಸೃಷ್ಠಿ ಗ್ಲೋಬಲ್ ಸಂಸ್ಥೆಗೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಜನಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಅಧಿಕೃತವಾಗಿ ಬೀಗ ಹಾಕಲಾಗಿದೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಸೃಷ್ಠಿ ಗ್ಲೋಬಲ್ ಮೆಡಿಕೇರ್ ಸಂಸ್ಥೆ ಬಂಜೆತನ ನಿವಾರಣೆ ಮಾಡುವುದಾಗಿ ಹೇಳಿ ಸಾವಿರಾರು ಜನರಿಗೆ ವಂಚಿಸಿತ್ತು. 20ಕ್ಕೂ ಹೆಚ್ಚು ಮಂದಿ ಕೆ.ಟಿ.ಗುರುಮೂರ್ತಿ ವಿರುದ್ಧ ದೂರನ್ನು ದಾಖಲಿಸಿದ್ದರು. ಸಂಸ್ಥೆಯ ವಿರುದ್ಧದ ಆರೋಪದ ಬಗ್ಗೆ ಡಾ.ವೀರಭದ್ರಯ್ಯ ನೇತೃತ್ವದ ಸಮಿತಿ ತನಿಖೆ ನಡೆಸಿದಾಗ, ಸೃಷ್ಠಿ ಸಂಸ್ಥೆಯ ವಂಚನೆ ಬಯಲಾಗಿತ್ತು.
ಈ ನಿಟ್ಟಿನಲ್ಲಿ ಸೃಷ್ಠಿ ಗ್ಲೋಬಲ್ ಸಂಸ್ಥೆ ಮುಚ್ಚುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕೆಎಂಸಿ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಇಂದು ಡಿಹೆಚ್ ಒ ರಜನಿ ನೇತೃತ್ವದಲ್ಲಿ ಸೃಷ್ಠಿ ಗ್ಲೋಬಲ್ ಮೆಡಿಕೇರ್ ಸಂಸ್ಥೆಗೆ ಕಾಮಾಕ್ಷಿಪಾಳ್ಯ ಪೊಲೀಸರ ಸಮ್ಮುಖದಲ್ಲಿ ಬೀಗ ಜಡಿದಿದ್ದಾರೆ.
ಪ್ರಕರಣದಲ್ಲಿ ಬಂಧನವಾಗಿದ್ದ ಸೃಷ್ಠಿ ಸಂಸ್ಥೆಯ ವಂಚಕ ಕೆ.ಟಿ.ಗುರುಮೂರ್ತಿ ಸದ್ಯ ಜೈಲಿನಲ್ಲಿದ್ದಾನೆ. ಸಂಸ್ಥೆಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ.ರಜನಿ ತಿಳಿಸಿದ್ದಾರೆ.