ಚೆನ್ನೈ : ಕಾವೇರಿ ನದಿಗೆ ಅಡ್ಡಲಾಗಿ ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟೆ ವಿರೋಧಿಸಿ ರೈತಪರ ಸಂಘಟನೆಗಳು ತಮಿಳುನಾಡು ಬಂದ್ ಗೆ ಕರೆ ಕೊಟ್ಟಿವೆ.
ಮೇಕೇದಾಟು ಯೋಜನೆ ವಿರೋಧಿಸಿ ಕರೆನೀಡಲಾಗಿರುವ ತಮಿಳುನಾಡು ಬಂದ್ ಹಿನ್ನಲೆಯಲ್ಲಿ ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿನಿಂದ ರಾಜ್ಯಕ್ಕೆ ಹೊರಡಬೇಕಾಗಿದ್ದ ಹಾಗೂ ರಾಜ್ಯದಿಂದ ತಮಿಳುನಾಡಿಗೆ ಹೊರಡಬೇಕಾಗಿದ್ದ ಎಲ್ಲಾ ಬಸ್ ಗಳನ್ನು ಸ್ಥಗಿತಗೊಳಿಸಲಾಗಿದ್ದು, ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಹಣ ವಾಪಸ್ ನೀಡಲಾಗುತ್ತಿದೆ.
ಬಂದ್ ಹಿನ್ನಲೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಬಂದ್ ನಡೆಸಲಾಗುತ್ತಿದೆ. ತಮಿಳುನಾಡಿನ ಹಲವು ಭಾಗಗಳಲಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಡಿಎಂಕೆ, ಪಿಎಂಕೆ, ಎಂಡಿಎಂಕೆ, ಕಾಂಗ್ರೆಸ್ ಹಾಗೂ ತಮಿಳು ಮಾನಿಲ ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧಪಕ್ಷಗಳು ಈ ಬಂದ್ ಗೆ ಬೆಂಬಲ ಸೂಚಿಸಿರುವುದರಿಂದ ತಮಿಳುನಾಡಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಈ ನಡುವೆ, ಮೇಕೆದಾಟು ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಕರ್ನಾಟಕ ಆ ಯೋಜನೆ ಕೈಗೆತ್ತಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡು ವಿಧಾನಸಭೆ, ಶುಕ್ರವಾರ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಅಣೆಕಟ್ಟೆ ಸಂಬಂಧ ಕರ್ನಾಟಕ ಕೈಗೊಳ್ಳಲು ಉದ್ದೇಶಿಸಿರುವ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆಗೂ ಕೇಂದ್ರ ತಡೆಯೊಡ್ಡಬೇಕು ಎಂದು ಸಿಎಂ ಒ.ಪನ್ನೀರ್ ಸೆಲ್ವಂ ಮಂಡಿಸಿದ ನಿರ್ಣಯ ಹೇಳುತ್ತದೆ.