ನವದೆಹಲಿ : 'ಪಾಕಿಸ್ತಾನ' ತನ್ನ ಗೂಢಚಾರರನ್ನು ಭಾರತಕ್ಕೆ ಕಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಭಾರತದ 'ಪ್ರಾಜೆಕ್ಟ್ ವರ್ಷಾ'(ನೌಕಾ ನೆಲೆ ಯೋಜನೆ) ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಲು ಪಾಕಿಸ್ತಾನ ಐ.ಎಸ್.ಐ ನ ಇಬ್ಬರು ಏಜೆಂಟರನ್ನು ಭಾರತಕ್ಕೆ ಕಳಿಸಿದೆ.
ರಾಷ್ಟ್ರೀಯ ತನಿಖಾದಳ(ಎನ್.ಐ.ಎ) ದಾಖಲಿಸಿರುವ ಚಾರ್ಜ್ ಶೀಟ್ ನಲ್ಲಿ, ಭಾರತದ ರಕ್ಷಣಾ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಐ.ಎಸ್.ಐ ಏಜೆಂಟ್ ರಿಗೆ ಪಾಕಿಸ್ತಾನ ಸೂಚನೆ ನೀಡಿತ್ತು. ಮಾಹಿತಿ ಪಡೆಯುವುದಕ್ಕಾಗಿ ನೌಕಾದಳದ ಅಧಿಕಾರಿಗಳನ್ನು ಸೆಳೆಯಲು ಅಗತ್ಯವಿರುವ ಹಣವನ್ನು ಒದಗಿಸುವುದಾಗಿ ಪಾಕಿಸ್ತಾನ ಹೇಳಿದೆ ಎಂದು ಎನ್.ಐ.ಎ ತಿಳಿಸಿದೆ.
ಭಾರತದ ಶಕ್ತಿ ಎಂಬ ಹೆಸರಿನಲ್ಲಿ ಭಾರತೀಯ ಆರ್ಮಿ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುವ ಮೂಲಕ ನೌಕಾದಳ ಹಾಗೂ ಸೇನಾ ಪಡೆಯ ಕುರಿತಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪಾಕಿಸ್ತಾನ ತನ್ನ ಗೂಢಚಾರರಲ್ಲಿ ಒಬ್ಬನಾದ ತಹಮೀಮ್ ಅನ್ಸಾರಿ ಎಂಬುವವನಿಗೆ ಸೂಚಿಸಿತ್ತು ಎಂದು ಎನ್.ಐ.ಎ ತನಿಖೆಯಿಂದ ತಿಳಿದುಬಂದಿದೆ.
ಪ್ರಮುಖವಾಗಿ ವಿಶಾಖಪಟ್ಟಣಂ ನೌಕಾ ನೆಲೆ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಪಾಕಿಸ್ತಾನ ತನ್ನ ಗೂಢಚಾರರಿಗೆ ಸೂಚಿಸಿತ್ತು ಎಂದು ತಿಳಿದುಬಂದಿದೆ.