ಸಿಡ್ನಿ : ಮಾ.26ರಂದು ನಡೆದ ವಿಶ್ವಕಪ್ ಕ್ರಿಕೆಟ್ ನ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯ ಅಂತ್ಯಗೊಂಡಿದ್ದು, ಆಸ್ಟ್ರೇಲಿಯಾಗೆ ಭಾರತದ ವಿರುದ್ಧ 95ರನ್ ಗಳ ಜಯ ದೊರೆತಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯ ತಂಡ ಭಾರತ ತಂಡಕ್ಕೆ ಗೆಲ್ಲಲು 329 ರನ್ಗಳ ಬೃಹತ್ ಸವಾಲೊಡ್ಡಿತ್ತು. ಭಾರತ ತಂಡದ ಓಪನರ್ ಗಳಾದ ರೋಹಿತ್ ಶರ್ಮಾ ಹಾಗು ಶಿಖರ್ ಧವನ್ ಮೊದಲ 10 ಓವರ್ ಗಳಲ್ಲಿ ರಕ್ಷಣಾತ್ಮಕ ಆಟ ಆಡಿದರು. ನಂತರ ಓವರ್ ಗಳಲ್ಲಿ ರನ್ ಕಲೆಹಾಕಲು ಹರಸಾಹಸ ಪಡಬೇಕಾಯಿತು.
ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಿಲುಕಿದ ಭಾರತ ತಂಡ ಅಂತಿಮವಾಗಿ 47 ಓವರ್ ಗಳಲ್ಲಿ 233 ರನ್ಗಳಿಗೆ ಸರ್ವ ಪತನ ಕಂಡಿತು. ಭರವಸೆಯ ಆಟಗಾರರಾದ ವಿರಾಟ್ ಕೋಹ್ಲಿ ಕೇವಲ ಒಂದು ರನ್ ಗಳಿಸಿ ಜಾನ್ಸನ್ ಎಸೆತದಲ್ಲಿ ವಿಕೇಟ್ ಕೀಪರ್ ಹ್ಯಾಡಿನ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಶಿಖರ್ ಧವನ್ 45 ರನ್ ಗಳಿಸಿ ಹಾಜಲ್ ವುಡ್ ಎಸೆತದಲ್ಲಿ ಮ್ಯಾಕ್ಸ್ ವೆಲ್ ಗೆ ಕ್ಯಾಚಿತ್ತು ಪೆವಿಲಿಯನ್ ಗೆ ತೆರಳಿದರು.
ಇನ್ನು ನಾಯಕ ಮಹೇಂದ್ರ ಸಿಂಗ್ ಧೋನಿ, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ, ಏಕಾಂಗಿ ಹೋರಾಟ ನಡೆಸಿದ್ದು ವ್ಯರ್ಥವಾಯಿತು. ಮಹೇಂದ್ರ ಸಿಂಗ್ ಧೋನಿ ಬಳಿಕ ಕ್ರೀಸ್ ಗೆ ಬಂದ ಆಟಗಾರರೆಲ್ಲರೂ ಪೆವಿಲಿಯನ್ ಪರೇಡ್ ನಡೆಸಿದರು. ಕ್ರಿಕೆಟ್ ವಿಶ್ವಕಪ್ ಗಾಗಿ ಮಾರ್ಚ್ 29 ರಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವೆ ಹಣಾಹಣಿ ನಡೆಯಲಿದೆ.