ಬೆಂಗಳೂರು : 'ದೇವರ ದಾಸಿಮಯ್ಯ' ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿ, ಇತಿಹಾಸಕಾರ ಚಿದಾನಂದ ಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.
ಮಾ.25ರಂದು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆಯುತ್ತಿದ್ದ ದೇವರದಾಸಿಮಯ್ಯ ಜಯಂತಿ ಸಮಾರಂಭದಲ್ಲಿ ದೇವರ ದಾಸಿಮಯ್ಯ ಆದ್ಯ ವಚನಕಾರ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚಿದಾನಂದ ಮೂರ್ತಿ ವಕೀಲೆ ಪ್ರಮೀಳಾ ನೇಸರ್ಗಿ ಸೇರಿದಂತೆ ಹಲವರನ್ನು ಎಳೆದೊಯ್ದು ವಶಕ್ಕೆ ಪಡೆದಿದ್ದರು.
'ದೇವರ ದಾಸಿಮಯ್ಯ' ವಚನಕಾರ ಅಲ್ಲ, 'ಜೇಡರ ದಾಸಿಮಯ್ಯ' ವಚನಕಾರ. ಇಬ್ಬರೂ ಬೇರೆ ಬೇರೆ ಆದರೆ ಇತಿಹಾಸದಿಂದ ಇಬ್ಬರೂ ಒಬ್ಬರೇ ಎಂಬ ತಪ್ಪು ಮಾಹಿತಿ ರವಾನೆ ಆಗುತ್ತಿದೆ ಎಂದು ಚಿದಾನಂದ ಮೂರ್ತಿ ಅವರು ವಿರೋಧ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೇ, ಸಿಎಂ ಸಿದ್ದರಾಮಯ್ಯ ಎದುರೇ ಚಿದಾನಂದ ಮೂರ್ತಿ ಹಾಗೂ ಇತರರು ವೇದಿಕೆಗೆ ನುಗ್ಗಿ ಘೋಷಣೆ ಕೂಗಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಪೊಲೀಸರು ಸಾಹಿತಿ ಚಿದಾನಂದಮೂರ್ತಿ ಹಾಗೂ ಇತರರನ್ನು ವಶಕ್ಕೆ ಪಡೆದರು.
ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಒಬ್ಬರೇ ಎಂಬ ವಾದವನ್ನು ಹಿರಿಯ ಸಾಹಿತಿ ಚಿದಾನಂದ ಮೂರ್ತಿ ಅವರು ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ. ಜೇಡರ ದಾಸಿಮಯ್ಯ ವಚನಕಾರನಾಗಿದ್ದ. ದೇವರ ದಾಸಿಮಯ್ಯ ಕಲ್ಯಾಣಿ ಚಾಲುಕ್ಯರ ಆಸ್ಥಾನಗುರುವಾಗಿದ್ದ. ಆದರೆ, ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ವ್ಯಕ್ತಿ ಎಂದು ತಪ್ಪು ಸಂದೇಶ ನೀಡಲಾಗಿದೆ. ಅವರಿಬ್ಬರೂ ಭಿನ್ನ ವ್ಯಕ್ತಿಗಳು. ಜೇಡರ ದಾಸಿಮಯ್ಯ ಮಾತ್ರ ವಚನಕಾರ. ಇದನ್ನರಿಯದೇ ಸರ್ಕಾರ ತನ್ನೆಲ್ಲ ಯೋಜನೆಗಳಿಗೆ ದೇವರ ದಾಸಿಮಯ್ಯನ ಹೆಸರು ಕೊಡಲು ಹೊರಟಿದೆ ಎಂದು ಚಿದಾನಂದ ಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.