ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಾಜ್ಯದ ಜನಕ್ಕೆ ಎಲ್ಲಾ ಭಾಗ್ಯಗಳನ್ನು ಕೊಟ್ಟಿದ್ದೀರಾ. ಅದೇ ರೀತಿ ಮದ್ಯಭಾಗ್ಯ ಜಾರಿ ಮಾಡುವುದರಿಂದ ತೆರಿಗೆ ಸಂಗ್ರಹವಾಗುತ್ತದೆ ಎಂದು ಜೆಡಿಎಲ್ ಪಿ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯನವರನ್ನು ವ್ಯಂಗ್ಯವಾಡಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯ ಬಜೆಟ್ 2015ರ ಮೇಲಿನ ಚರ್ಚೆ ವೇಳೆ ಮಾತನಾಡಿದ ಕುಮಾರಸ್ವಾಮಿ, ಈ ಹಿಂದೆ ಜೆಡಿಎಸ್ ಸರ್ಕಾರದಲ್ಲಿ ಡಿಸಿಎಂ ಆಗಿದ್ದಾಗ ಉತ್ತಮ ಬಜೆಟ್ ಮಂಡಿಸಿದ್ದರು. ಆದರೆ ಈಗ ಸಿದ್ದರಾಮಯ್ಯನವರು ದೂರದೃಷ್ಟಿ ಇಲ್ಲದ ಬಜೆಟ್ ಮಂಡಿಸಿದ್ದಾರೆ ಎಂದು ದೂರಿದರು.
ಹಾಗಾಗಿ ರಾಜ್ಯದಲ್ಲಿ ಸಾರಾಯಿ ಭಾಗ್ಯ ಜಾರಿಗೆ ತಂದರೆ ಸರ್ಕಾರದ ಜನಪ್ರಿಯತೆ ಹೆಚ್ಚುತ್ತೆ, ಜೊತೆಗೆ ಹೆಚ್ಚು ತೆರಿಗೆ ವಸೂಲಿ ಮಾಡಲು ಆಗುತ್ತದೆ ಎಂದು ಟೀಕಿಸಿದರು. ಆಗ ಬಿಜೆಪಿಯ ಗೋವಿಂದ ಕಾರಜೋಳ ಕುಮಾರಸ್ವಾಮಿ ಮಾತಿಗೆ ದನಿಗೂಡಿಸಿದರು.
ಗಣಿಗಳನ್ನು ಹರಾಜು ಹಾಕುವ ಬದಲು ಹಂಚಿಕೆ ಮಾಡಿದ್ದೀರಿ, ಇದರಿಂದ ರಾಜ್ಯ ಸರ್ಕಾರಕ್ಕೆ 1,500 ಕೋಟಿ ರೂಪಾಯಿ ನಷ್ಟವಾಗಿದೆ. ಗ್ರಾನೈಟ್ ವಲಯಗಳನ್ನೂ ಹಂಚಿಕೆ ಮಾಡಲು ಹೊರಟಿದ್ದೀರಿ. ಇದರಿಂದ ಲಾಭ ಸಿಗುತ್ತೆ ಎಂದು ಹೇಳಿದರು.