BW News Bureau : ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತ ತಡೆ ಹಾಗೂ ಸುಗಮ ಸಂಚಾರಕ್ಕೆ ಸ್ಕೈವಾಕ್, ಪಾದಚಾರಿ ಮಾರ್ಗ, ಸಬ್ ವೇ ಗಳನ್ನು ನಿರ್ಮಿಸುವ ಮೂಲಕ ವ್ಯಾಪಕ ಕ್ರಮ ಜರುಗಿಸಲಾಗುತ್ತಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಬಿಜೆಪಿಯ ಡಾ.ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿ, ಬಿಡಿಎ ಜತೆಗೂಡಿ ಸಬ್ ವೇ, ಫೆಲಿಖಾನ್ ಲೈಟ್, ಝೀಬ್ರಾ ಕ್ರಾಸಿಂಗ್, ಸ್ಕೈವಾಕ್ ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದರು.
ಮೇಖ್ರಿ ವೃತ್ತದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರಗೆ 2013ರಿಂದ ಈ ವರೆಗೆ ಒಟ್ಟು 638 ಅಪಘಾತಗಳು ಸಂಭವಿಸಿದ್ದು 121 ಜನ ಮೃತಪಟ್ಟಿದ್ದಾರೆ. ಹೆಬ್ಬಾಳ ಮೇಲ್ಸೇತುವೆಯಿಂದ ಕೆ.ಆರ್.ಪುರ-ಸರ್ಜಾಪುರ ರಿಂಗ್ ರಸ್ತೆಯಲ್ಲಿ 353 ಅಪಘಾತಗಳು ಆಗಿದ್ದು, 80 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ನಾಯಂಡಹಳ್ಳಿಯಿಂದ ಬನ್ನೇರುಘಟ್ಟ ರಿಂಗ್ ರಸ್ತೆಯಲ್ಲಿ 185 ಅಪಘಾತಗಳು ಸಂಭವಿಸಿದ್ದು, 27 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಬೆಂಗಳೂರು ನಗರದಲ್ಲಿ 834 ಅಪಘಾತಗಳು ಸಂಭವಿಸಿದ್ದು, 113 ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಒದಗಿಸಿದರು.
ಅಶ್ವಥ್ ನಾರಾಯಣ ವಿಷಯ ಪ್ರಸ್ತಾಪಿಸಿ, ನಗರದಲ್ಲಿ ಸಿಗ್ನಲ್ ಲೈಟ್, ಸ್ಕೈವಾಕರ್, ಅಂಡರ್ ಪಾಸ್, ಕಾಮಗಾರಿ ತ್ವರತಿಗತಿಯಲ್ಲಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಮೃತಪಡುತ್ತಿದ್ದು, ಅವರ ಸುರಕ್ಷತೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರ ನೀಡುವಂತೆ ಆಗ್ರಹಿಸಿದರು.