ನವದೆಹಲಿ : ಪಾಕ್ ದಿನಾಚರಣೆಯಲ್ಲಿ ದೇಶವನ್ನು ಪ್ರತಿನಿಧಿಸಿದ ಬಳಿಕ ಕೇಂದ್ರ ಸರ್ಕಾರದ ವಿರುದ್ಧವೇ ಸಚಿವ ಜ|ವಿ.ಕೆ.ಸಿಂಗ್ ಸರಣಿ ಟ್ವೀಟ್ ಮಾಡಿದ್ದಾರೆ.
ದೆಹಲಿಯಲ್ಲಿ ಪಾಕಿಸ್ತಾನ ರಾಯಭಾರ ಕಚೇರಿ ಹಮ್ಮಿಕೊಂಡಿದ್ದ ಪಾಕ್ ದಿನಾಚರಣೆಗೆ ತಮ್ಮನ್ನು ಕಳಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕ್ರಮಕ್ಕೆ ಸ್ವತಃ ಮಂತ್ರಿಮಂಡಲದ ಸಚಿವರಾದ ನಿವೃತ್ತ ಸೇನಾ ಮುಖ್ಯಸ್ಥ ಜ| ವಿ.ಕೆ.ಸಿಂಗ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ ಕರ್ತವ್ಯದ ಕರೆಗೆ ಓಗೊಟ್ಟು ಸರ್ಕಾರದ ಸೂಚನೆ ಮೇರೆಗೆ ನಾನು ವಿದೇಶಾಂಗ ಖಾತೆ ರಾಜ್ಯ ಸಚಿವನಾಗಿ ಹೋಗಿದ್ದೆ' ಎಂದು ಸುದ್ದಿಗಾರರೆದುರು ಸಿಂಗ್ ಹೇಳಿಕೊಂಡಿದ್ದಾರೆ.
ಆದರೆ ಇದಾದ ಕೆಲವೇ ಹೊತ್ತಿನಲ್ಲಿ ಟ್ವೀಟ್ ಮಾಡಿರುವ ಅವರು, ಮನಸ್ಸಿಲ್ಲದ ಮನಸ್ಸಿನಿಂದ ಹೋಗಿದ್ದೇನೆ. ಅಸಹ್ಯವೆನ್ನಿಸುತ್ತಿದೆ' ಎಂದು ಹೇಳಿದ್ದಾರೆ. ಸಿಂಗ್ ರ ಈ ಹೇಳಿಕೆ ವಿವಾದಕ್ಕೀಡಾಗುವ ಸಾಧ್ಯತೆ ಇದೆ. ಈ ನಡುವೆ, ಒಬ್ಬ ನಿವೃತ್ತ ಸೇನಾ ಮುಖ್ಯಸ್ಥನಾಗಿ ಭಾರತ ದ್ವೇಷಿ ಪಾಕ್ ನ ಸಮಾರಂಭದಲ್ಲಿ ಪಾಲ್ಗೊಂಡ ಬಗ್ಗೆ ಸಿಂಗ್ ವಿರುದ್ಧ ಹುತಾತ್ಮರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್ ದಿನಾಚರಣೆಯಲ್ಲಿ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಜತೆ ಕೇವಲ 10 ನಿಮಿಷ ಕಳೆದ ಸಿಂಗ್, ಉಳಿದವರಾರ ಜತೆಯೂ ಮಾತನಾಡದೇ ಅಲ್ಲಿಂದ ತೆರಳಿದರು ಎಂದು ಹೇಳಲಾಗಿದೆ.
ನಂತರ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿ.ಕೆ ಸಿಂಗ್, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸರ್ಕಾರವೇ ಸೂಚನೆ ನೀಡಿತ್ತು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸರ್ಕಾರಕ್ಕೆ ಆಹ್ವಾನ ಬಂದಿತ್ತು. ಆದ್ದರಿಂದ ಕೇಂದ್ರ ಸರ್ಕಾರ ರಾಜ್ಯ ಸಚಿವರನ್ನು ಕಳಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ತಮ್ಮನ್ನು ಕಳಿಸಿದ್ದಾರೆ ಎಂದು ವಿ.ಕೆ ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನ ದಿನಾಚರಣೆಯಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿಗಳು ಭಾಗವಹಿಸಿದ್ದರು. ಭಾರತ ಹಾಗೂ ಪಾಕಿಸ್ತಾನದ ವಿಷಯಗಳಲ್ಲಿ ಮೂರನೇ ವ್ಯಕ್ತಿಗಳು ಮೂಗುತೂರಿಸುವುದಕ್ಕೆ ಅವಕಾಶ ಇಲ್ಲ ಎಂದು ಪಾಕಿಸ್ತಾನ ಹೈಕಮಿಷನರ್ ಹೇಳಿದ ನಂತರ ವಿ.ಕೆ ಸಿಂಗ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡಿದರೂ ಇದಕ್ಕೆ ಭಾರತದ ಆಕ್ಷೇಪ ಇಲ್ಲ ಎಂದು ಪಾಕ್ ಹೈಕಮಿಷನರ್ ಅಬ್ದುಲ್ ಬಸೀತ್ ಹೇಳಿದ್ದರು. ಪಾಕಿಸ್ತಾನದ ರಾಯಭಾರಿಗೆ ತಿರುಗೇಟು ನೀಡಿದ್ದ ಭಾರತ ಸರ್ಕಾರ, ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.