ನವದೆಹಲಿ : ಮಾರ್ಚ್ 19ರಂದು ನಡೆದ ಭಾರತ-ಬಾಂಗ್ಲಾ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಟೌಟ್ ತೀರ್ಪಿನ ವಿರುದ್ಧ ಐಸಿಸಿ ಅಧ್ಯಕ್ಷ ಮುಸ್ತಫಾ ಕಮಲ್ ಅಸಮಾಧಾನಕ್ಕೆ ಇದೀಗ ಬಾಂಗ್ಲಾದೇಶ್ ಪ್ರಧಾನಿ ಶೇಕ್ ಹಸೀನಾ ಧ್ವನಿಗೂಡಿಸಿದ್ದು, ವಿಶ್ವಕಪ್ ನ ಕ್ವಾರ್ಟರ್ ಫೈನಲ್ ನಲ್ಲಿ ಬಾಂಗ್ಲಾ ವಿರುದ್ಧ ಗೆಲ್ಲಲು ಅಂಪಾಯರ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಪೈರ್ ನಿರ್ಣಯದಲ್ಲಿ ದೋಷ ಇಲ್ಲದಿರುತ್ತಿದ್ದರೆ ಭಾರತದ ಟೀಂಗೆ ಬಾಂಗ್ಲಾ ತಂಡವನ್ನು ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹಸೀನಾ ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
ಮುಸ್ತಫಾ ಈಗಾಗಲೇ ಅಗತ್ಯಬಿದ್ದರೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತನಿಖೆ ಅಗತ್ಯ. ಈ ಬಗ್ಗೆ ಇತ್ಯರ್ಥವಾಗಲೇಬೇಕು ಎಂದು ಖಾಸಗಿ ಟೀವಿ ವಾಹಿನಿಯೊಂದಕ್ಕೆ ಹೇಳಿದ್ದರು.ರೋಹಿತ್ ನಾಟೌಟ್ ತೀರ್ಪಿನ ಬಗ್ಗೆ ಬಾಂಗ್ಲಾದಲ್ಲಿ ಆಕ್ರೋಶ ತೀವ್ರಗೊಂಡಿದೆ. ದಿನಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕಳಪೆ ಅಂಪೈರಿಂಗ್ ವಿರುದ್ಧ ಟೀಕೆ ತೀವ್ರಗೊಂಡಿದೆ.
ಬಾಂಗ್ಲಾ ವಿರುದ್ಧ ಪಂದ್ಯದ ವೇಳೆ ಸೊಂಟಮಟ್ಟಕ್ಕೆ ನೇರವಾಗಿ ಬಂದ ಎಸೆತವೊಂದನ್ನು 90ರನ್ ಗಳಿಸಿದ್ದ ರೋಹಿತ್ ಶರ್ಮಾ ಒಂದೇ ಕೈಯಲ್ಲಿ ಬಾರಿಸಿದ್ದರು. ಅದು ಕ್ಯಾಚ್ ಆಗಿತ್ತು. ಆದರೆ ಲೆಗ್ ಅಂಪೈರ್ ಅಲೀಂ ದಾರ್ ಆ ಎಸೆತವನ್ನು ನೋಬಾಲ್ ಎಂಬ ತೀರ್ಪು ನೀಡಿದ್ದರು. ಟೀವಿ ರಿಪ್ಲೇಯಲ್ಲಿ ಅದು ಔಟ್ ಎನ್ನುವುದು ಸ್ಪಷ್ಟವಾಗಿತ್ತು.
ಈ ತೀರ್ಪಿನಿಂದ ಮತ್ತೆ ಆಡುವ ಅವಕಾಶ ಪಡೆದ ರೋಹಿತ್ ತಮ್ಮ ಇನಿಂಗ್ಸನ್ನು 137ರವರೆಗೆ ವಿಸ್ತರಿಸಿದರು. ಅವರ ಭರ್ಜರಿ ಆಟದಿಂದಾಗಿ 302 ರನ್ ಟೀಂ ಇಂಡಿಯಾ ಗಳಿಸಿತ್ತು. ಒಂದು ವೇಳೆ ಇದು ನಡೆಯದಿದ್ದರೆ ಭಾರತದ ಆಟ 250ಕ್ಕೆ ಸೀಮಿತಗೊಳ್ಳುವ ಸಾಧ್ಯತೆ ಇತ್ತು.
ಇದರ ವಿರುದ್ಧವೇ ಈಗ ಬಾಂಗ್ಲಾದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿನ ದಿನಪತ್ರಿಕೆಗಳಲ್ಲಿ ದ ಅಂಪೈರ್ಸ್ ಡಿಫೀಟೆಡ್ ಬಾಂಗ್ಲಾದೇಶ್ ಎಂಬ ತಲೆಬರಹ ಪ್ರಕಟವಾಗಿದೆ. ಢಾಕಾ ಟ್ರಿಬ್ಯೂನ್ ಎಂಬ ಪತ್ರಿಕೆಯಲ್ಲಿ ಇಂಡಿಯಾ, ಅಂಪೈರ್ಸ್ ಬೀಟ್ ಬಾಂಗ್ಲಾದೇಶ್ ಎಂದು ಪ್ರಕಟವಾಗಿದೆ.