ನವದೆಹಲಿ : 'ರಾಜ್ಯಸಭೆ'ಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡು ಪ್ರಮುಖ ಮಸೂದೆಗಳು ಅಂಗೀಕಾರವಾಗಿದೆ. ಕಲ್ಲಿದ್ದಲು ಹಾಗೂ ಖನಿಜ (ತಿದ್ದುಪಡಿ) ಮಸೂದೆಗಳಿಗೆ ಅಂಗೀಕಾರ ಪಡೆಯುವಲ್ಲಿ ಮೋದಿ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ.
ಮಾ.20ಕ್ಕೆ ಸಂಸತ್ ನ ಬಜೆಟ್ ಅಧಿವೇಶನದ ಪ್ರಥಮ ಭಾಗ ಮುಕ್ತಾಯಗೊಳ್ಳಲಿದ್ದು, ಈ ಎರಡೂ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದು ಅಗತ್ಯವಾಗಿತ್ತು. ಜನವರಿಯಲ್ಲಿ ಸುಗ್ರೀವಾಜ್ನೆ ಮೂಲಕ ಜಾರಿಗೊಂಡಿದ್ದ ಮಸೂದೆ ಪರವಾಗಿ 117 ರಾಜ್ಯಸಭಾ ಸದಸ್ಯರು ಮತಚಲಾಯಿಸಿದ್ದರೆ, 69 ಸದಸ್ಯರು ಕಾಯ್ದೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ.
ತೃಣಮೂಲ ಕಾಂಗ್ರೆಸ್, ಬಿಜೆಡಿ, ಬಹುಜನ ಸಮಾಜವಾದಿ ಪಕ್ಷ, ಎನ್.ಸಿ.ಪಿ, ಜಾರ್ಖಂಡ್ ಮುಕ್ತಿ ಮೋರ್ಚಾ, ಸಮಾಜವಾದಿ ಪಕ್ಷ, ಎ.ಐ.ಎ.ಡಿ.ಎಂ.ಕೆ ಪಕ್ಷದ ಸದಸ್ಯರು ಕೇಂದ್ರ ಸರ್ಕಾರದ ಮಸೂದೆ ಪರವಾಗಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಮತ ಚಲಾಯಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕಲ್ಲಿದ್ದಲು ಹಾಗೂ ಖನಿಜ ಮಸೂದೆಯಲ್ಲಿ ಗಣಿಗಾರಿಕೆಯಿಂದ ಬರುವ ಲಾಭವನ್ನು ಸ್ಥಳೀಯ ಪ್ರದೇಶದ ಅಭಿವೃದ್ಧಿಗೆ ಬಳಸಬೇಕೆಂಬ ಅಂಶಗಳಿವೆ.