ನವದೆಹಲಿ : ಜಮ್ಮು-ಕಾಶ್ಮೀರ ಸರ್ಕಾರ ಪ್ರತ್ಯೇಕತಾವಾದಿಗಳ ಪರವಾಗಿರುವುದು ಆಡಳಿತಾರೂಢ ಮೈತ್ರಿಪಕ್ಷವಾಗಿರುವ ಬಿಜೆಪಿಗೆ ತ್ರಿಶಂಕು ಸ್ಥಿತಿಯನ್ನು ತಂದೊಡ್ಡಿದ್ದು, ಇದೀಗ ಕಾಶ್ಮೀರ ವಿವಾದ ಬಗೆಹರಿಯದಿದ್ದರೆ ಕಣಿವೆ ರಾಜ್ಯದಲ್ಲಿ ಪಿಡಿಪಿ ಜೊತೆಗಿನ ಮೈತ್ರಿ ಕಡಿದುಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ದೇಶದ ಹಿತಾಸಕ್ತಿ ವಿಚಾರದಲ್ಲಿ ಪಕ್ಷ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಶ್ಮೀರ ವಿವಾದ ಸೇರಿದಂತೆ ಪ್ರತ್ಯೇಕತಾವಾದಿಗಳ ಪರ ಪಿಡಿಪಿ ಸರ್ಕಾರ ಕ್ಯಾತೆ ಮುಂದುವರಿಸಿದರೆ ನಿಮ್ಮ ಜೊತೆಗಿನ ಮೈತ್ರಿ ಕಡಿದುಕೊಳ್ಳುತ್ತೇವೆ ಎಂದು ಶಾ ಗುಡುಗಿದ್ದಾರೆ.
ಈ ದೇಶದ ಜನತೆ ನಮಗೆ ಶಿವನಂತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಅಷ್ಟೇ ಅಲ್ಲ ತುಂಬಾ ದೊಡ್ಡ ಜವಾಬ್ದಾರಿಯನ್ನೂ ಹೊರಿಸಿದ್ದಾರೆ. ಹಾಗಾಗಿ ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಹಿತಾಸಕ್ತಿ ವಿಚಾರದಲ್ಲಿ ಸಂಧಾನ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸುವ ಮೂಲಕ ಜಮ್ಮು-ಕಾಶ್ಮೀರದಲ್ಲಿನ ಮೈತ್ರಿ ಸರ್ಕಾರದ ಪಿಡಿಪಿಗೆ ಶಾ ತಿರುಗೇಟು ನೀಡಿದ್ದಾರೆ.
ಕಣಿವೆ ರಾಜ್ಯದಲ್ಲಿ ಸರ್ಕಾರ ರಚನೆಯಾಗಿರುವುದೇ ಕಾಶ್ಮೀರ ವಿವಾದವನ್ನು ಬಗೆಹರಿಸಲು. ಆ ನಿಟ್ಟಿನಲ್ಲಿ ಈ ವಿವಾದ ಬಗೆಹರಿಸಲು ಪರಿಹಾರ ಕಂಡುಹಿಡಿಯುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ತಾನು ಹೊಂದಿರುವುದಾಗಿ ಶಾ ಹೇಳಿದ್ದಾರೆ.