ನವದೆಹಲಿ : ಕೆಂಪು ಗೂಟದ ದೀಪವನ್ನು ಇನ್ನು ಮುಂದೆ ಸಾಂವಿಧಾನಿಕ ಹುದ್ದೆ ಹೊಂದಿರುವ ಕೇಂದ್ರದ ಐದು ಮಂದಿ ಮತ್ತು ರಾಜ್ಯದ ನಾಲ್ಕು ಮಂದಿ - ಒಟ್ಟು ಕೇವಲ 9 ಮಂದಿ ಮಾತ್ರವೇ ಬಳಸಬಹುದಾಗಿದೆ.
ಕೇಂದ್ರದಲ್ಲಿನ ಸಾಂವಿಧಾನಿಕ ಹುದ್ದೆ ಹೊಂದಿರುವ ಐವರು ಅಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸ್ಪೀಕರ್ ಮತ್ತು ಭಾರತದ ಶ್ರೇಷ್ಠ ನ್ಯಾಯಾಧೀಶರು. ರಾಜ್ಯದ ನಾಲ್ವರು ಅಂದರೆ ರಾಜ್ಯಪಾಲರು, ಮುಖ್ಯಮಂತ್ರಿ, ಅಸೆಂಬ್ಲಿ ಸ್ಪೀಕರ್ ಮತ್ತು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು.
ಈ 9 ಮಂದಿಯನ್ನು ಹೊರತು ಪಡಿಸಿ ಇನ್ಯಾರೂ ಕೆಂಪು ಗೂಟದ ವಾಹನವನ್ನು ಬಳಸುವಂತಿಲ್ಲ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಕುರಿತ ಅಂತಿಮ ಪ್ರಸ್ತಾವವನ್ನು ಸಂಪುಟದ ಮುಂದೆ ಮಂಡಿಸುವುದಕ್ಕೆ ಮುನ್ನ ಪ್ರಮುಖ ಕೇಂದ್ರ ಸಚಿವರ ಅಭಿಪ್ರಾಯವನ್ನು ಕೇಳಿದ್ದಾರೆ.
ಕೆಂಪು ಗೂಟದ ವಾಹನ ಬಳಕೆಯನ್ನು ಕೇವಲ 9 ಮಂದಿಗೆ ಸೀಮಿತಗೊಳಿಸುವ ತನ್ನ ಪ್ರಸ್ತಾವದ ಕುರಿತಾಗಿ ಸಚಿವ ಗಡ್ಕರಿ ಅವರು ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಇತರ ಪ್ರಮುಖ ಸಂಪುಟ ಸದಸ್ಯರಿಗೆ ಟಿಪ್ಪಣಿ ಬರೆದಿದ್ದಾರೆ.
2013ರಲ್ಲೇ ಸುಪ್ರೀಂ ಕೋರ್ಟ್, ಕೆಂಪು ಗೂಟದ ದೀಪವಿರುವ ವಾಹನಗಳನ್ನು ಬಳಸುವುದಕ್ಕೆ ಒಂದು ನಿರ್ದಿಷ್ಟ ಮಾನದಂಡ ರಚಿಸುವಂತೆ ಕೇಂದ್ರ ಸರಕಾರವನ್ನು ಕೇಳಿಕೊಂಡಿತ್ತು. ಗಡ್ಕರಿ ಅವರು ಸುಪ್ರೀಂ ಕೋರ್ಟ್ ಆದೇಶದ ವಿವರಗಳನ್ನು, ಕಾನೂನು ಅಭಿಪ್ರಾಯದ ಟಿಪ್ಪಣಿಗಳನ್ನು ಸಂಪುಟ ಸದಸ್ಯರಿಗೆ ನೀಡಿ ಅವರ ಅಭಿಪ್ರಾಯವನ್ನು ಕೋರಿದ್ದಾರೆ.