B T M Layout : ಕೋಲಾರ ಜಿಲ್ಲೆಯ ಜನರ ನೆಚ್ಚಿನ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ ರವಿ ಅವರು ಮಾ.16ರಂದು ಸಂಜೆ ಮೃತಪಟ್ಟಿದ್ದು, ಅವರ ಸಾವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರಿನ ಕೊರಮಂಗಲದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಡಿ.ಕೆ ರವಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಡಿ.ಕೆ ರವಿ ಅವರ ಸಾವು ಆತ್ಮಹತ್ಯೆ ಎಂದು ಕಂಡಬಂದರೂ ಅವರ ಸಾವಿನ ಹಿಂದೆ ಹಲವು ಅನುಮಾನಗಳು ಮೂಡುತ್ತಿವೆ. ಕೋರಮಂಗಲ ಬಳಿ ಇರುವ ತಮ್ಮ ಸೇಂಟ್ ಜಾನ್ಸ್ ವುಡ್ ಅಪಾರ್ಟ್ ಮೆಂಟ್ ಬಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ರವಿ ಅವರನ್ನು ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡಿದ್ದ ಮೂವರು ಸಂಜೆ 5.30ರಲ್ಲಿ ಭೇಟಿ ಮಾಡಿದ್ದರು. ಆ ಬಳಿಕವೇ ರವಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿ.ಕೆ ರವಿ ಅವರು ತಮ್ಮ ಪ್ರಾಮಾಣಿಕತೆಯಿಂದ ಖಡಕ್ ಜಿಲ್ಲಾಧಿಕಾರಿಯೆಂದೇ ಖ್ಯಾತಿ ಪಡೆದಿದ್ದರು. ಕೋಲಾರದಲ್ಲಿ ಅಕ್ರಮ ಭೂ ಒತ್ತವರಿದಾರರ ವಿರುದ್ಧ ಸಮರವನ್ನೇ ಸಾರಿ ಸರ್ಕಾರಿ ಗೋಮಾಳ, ಸರ್ಕಾರಿ ಭೂಮಿ ಮತ್ತು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದ್ದರು. ಪ್ರಾಮಾಣಿಕರಾಗಿದ್ದ ಅವರನ್ನು ಸರ್ಕಾರ ಇತ್ತೀಚೆಗಷ್ಟೇ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ ಸ್ಥಾನಕ್ಕೆ ವರ್ಗಾವಣೆ ಮಾಡಿತ್ತು. ಈ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಯ ಮೂಲಕವಾಗಿ ಡಿ.ಕೆ ರವಿ ಅವರು ಹಲವು ಖ್ಯಾತ ಉದ್ಯಮಿಗಳು ಮತ್ತು ತೆರಿಗೆ ಕಳ್ಳರ ಮನೆಗಳ ಮೇಲೆ ದಾಳಿ ಮಾಡಿ ಅಕ್ರಮವನ್ನು ಬಯಲು ಮಾಡಿದ್ದರು.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ಅನೇಕ ಹಿರಿಯ ರಾಜಕಾರಣಿಗಳು ರವಿ ಅವರ ಅಪಾರ್ಟ್ ಮೆಂಟ್ ನತ್ತ ಧಾವಿಸಿದ್ದಾರೆ.