ನವದೆಹಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಗೂಢಚರ್ಯೆ ನಡೆಸಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ರಾಹುಲ್ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸುವುದರಲ್ಲಿ ತಪ್ಪಿಲ್ಲ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜಕಾರಣದಿಂದ ಕೊಂಚ ನಿರಾಳತೆ ಪಡೆಯುವ ಸಲುವಾಗಿ ಮತ್ತು ಪಕ್ಷದ ಭವಿಷ್ಯದ ಬಗ್ಗೆ ಆತ್ಮಾವಲೋಕನ ನಡೆಸುವುದಕ್ಕಾಗಿ ದಿಢೀರನೆ ರಜೆಯಲ್ಲಿ ಹೋಗಿ ಆ ಬಳಿಕ ಸತತವಾಗಿ ಎರಡು ಬಾರಿ ತನ್ನ ಗೈರನ್ನು ಮುಂದುವರಿಸುತ್ತಲೇ ಹೋಗಿರುವ ರಾಹುಲ್ ಗಾಂಧಿ ಅವರ ಬಗ್ಗೆ ವಿಚಾರಿಸಿಕೊಳ್ಳಲು ದೆಹಲಿ ಪೊಲೀಸರು ಕಳೆದ ವಾರ ರಾಹುಲ್ ಕಾರ್ಯಾಲಯ ಹಾಗೂ ನಿವಾಸಕ್ಕೆ ಭೇಟಿ ನೀಡಿ ಅವರ ಚಹರೆ ಮೊದಲಾದ ಮಾಹಿತಿ ಸಂಗ್ರಹಿಸಿದ್ದರು. ಈ ಕ್ರೆಅಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ರಾಹುಲ್ ವಿರುದ್ಧ ಗೂಢಚರ್ಯೆ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಅಲ್ಲದೇ ಇದೇ ವಿಚಾರ ಸಂಸತ್ ಅಧಿವೇ₹ಹನದಲ್ಲಿ ಪ್ರತಿಧ್ವನಿಸಿದ್ದು, ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಸಂಸದ ಗುಲಾಮ್ ನಬಿ ಆಜಾದ್, ಸರ್ಕಾರ ರಾಹುಲ್ ಗಾಂಧಿಗೆ z+ ಭದ್ರತೆ ನೀಡಿದೆ. ಆದಾಗ್ಯೂ ಸರ್ಕಾರಕ್ಕೆ ರಾಹುಲ್ ಬಗ್ಗೆ ತಿಳಿದಿಲ್ಲವೇ? ಈಗ ರಾಹುಲ್ ಗಾಂಧಿ ನಿವಾಸ, ಕಛೇರಿಗೆ ತೆರಳಿ ಇದ್ದಕ್ಕಿದ್ದಂತೆ ಪೊಲೀಸರು ವಿಚಾರಣೆ ನಡೆಸುವ ಅಗತ್ಯವೇನಿತ್ತು?. ಇಬ್ಬರು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಎಲ್ಲರ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸರ ಹೇಳಿಕೆ ನೀಡುತ್ತಾರೆ. ಆದರೆ ಈಗ ರಾಹುಲ್ ನಿವಾಸಕ್ಕೆ ಬರಲು ಕಾರಣವೇನು? ಕೇಂದ್ರ ಎನ್ ಡಿಎ ಸರ್ಕಾರ ನಮ್ಮನ್ನು ಹೆದರಿಸಲು ಯತ್ನಿಸುತ್ತಿದ್ದೆಯೇ? ಈ ಬಗ್ಗೆ ಕೇಂದ್ರ ಗೃಹ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಇಕ್ಕುತ್ತರಿಸಿದ ಸಚಿವ ಅರುಣ್ ಜೇಟ್ಲಿ, ರಾಹುಲ್ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸುವುದರಲ್ಲಿ ತಪ್ಪಿಲ್ಲ. ಮನೆಗೆ ಹೋಗಿ ವಿಚಾರಿಸುವುದು ಪೊಲೀಸರ ಕರ್ತವ್ಯ. ವಿವಿಐಪಿಗಳ ಭದ್ರತೆ ಬಗ್ಗೆ ಸದಾ ನಿಗಾ ಇಡುವುದೇ ಅವರ ಕೆಲಸ. ಪೊಲೀಸರು ಅವರ ಕೆಲಸ ಮಾಡಿದ್ದಾರೆ ಅಷ್ಟೇ.
1999ರಿಂದಲೂ ಈ ವಿಚಾರಣೆ ಜಾರಿಯಲ್ಲಿದೆ.ಎನ್ ಡಿಎ, ಯುಪಿಎ ಸರ್ಕಾರದ ಅವಧಿಯಲ್ಲಿಯೂ ನಡೆದಿದೆ ಮನೆಗೆ ಹೋಗಿ ವಿಚಾರಿಸಿದ್ದಕ್ಕೆ ಅದು ಗೂಢಚರ್ಯೆ ಆಗಲ್ಲ. ಎಲ್ಲರೂ ಭದ್ರತಾ ದೃಷ್ಟಿಯಿಂದ ಆಲೋಚಿಸಬೇಕು. ಕಾಂಗ್ರೆಸ್ ನಾಯಕರು ಇದನ್ನು ಅರ್ಥಮಾಡಿಕೊಳ್ಳಬೇಕು. ಸುರಕ್ಷತಾ ದೃಷ್ಟಿಯಿಂದ ಇದು ತುಂಬಾ ಮುಖ್ಯ. ಅಟಲ್ ಬಿಹಾರಿ ವಾಜಪೇಯಿ ಅವರನ್ನೂ ವಿಚಾರಣೆ ಮಾಡಲಾಗಿತ್ತು
ವಿಚಾರಣೆ ನಡೆಸಿದ ಮಾತ್ರಕ್ಕೆ ರಾಹುಲ್ ವಿರುದ್ಧ ಗೂಢಚರ್ಯೆ ನಡೆಸಲಾಗಿದೆ ಎನ್ನುವುದು ಸರಿಯಲ್ಲ. ಕಾಂಗ್ರೆಸ್ ಈ ವಿಷಯವನ್ನು ಪ್ರಸ್ತಾಪಿಸಿರುವುದೇ ಅರ್ಥವಿಲ್ಲದ ವಿಷಯ ಎಂದು ಕಾಂಗ್ರೆಸ್ ನಾಯಕರ ಆರೋಪ ತಳ್ಳಿಹಾಕಿದರು.