ನವದೆಹಲಿ : ರಜೆ ಮೇಲೆ ತೆರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮನೆಗೆ ಹೋಗಿ ಅವರ ಬಣ್ಣ, ಎತ್ತರ, ವಯಸ್ಸು, ಧರಿಸುವ ಬಟ್ಟೆ, ತಂದೆ ಹೆಸರು, ಭೇಟಿ ನೀಡುವ ಸ್ಥಳಗಳ ಬಗ್ಗೆ ದೆಹಲಿ ಪೊಲೀಸ್ ಸಿಬ್ಬಂದಿ ಮಾಹಿತಿ ಕೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು ಕೇಂದ್ರ ಸರ್ಕಾರದ ರಾಜಕೀಯ ಗೂಢಚರ್ಯೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ಅಲ್ಲದೆ, ಈ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಗಳೇ ಸ್ಪಷ್ಟನೆ ನೀಡಬೇಕು. ಈ ವಿಚಾರವನ್ನು ಸಂಸತ್ತಿನಲ್ಲೂ ಪ್ರಸ್ತಾಪಿಸಲಾಗುವುದು ಎಂದು ಘೋಷಿಸಿದೆ. ಹೀಗಾಗಿ, ರಾಹುಲ್ ನಿಗೂಢ ರೀತಿಯಲ್ಲಿ ರಜೆ ಮೇಲೆ ತೆರಳಿರುವಾಗ ನಡೆದಿರುವ ಈ ಘಟನೆ ಸಂಸತ್ತಿನಲ್ಲಿ ಸೋಮವಾರ ಭಾರಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಆದರೆ ಇದೊಂದು ಸಾಮಾನ್ಯ ಭದ್ರತಾ ಪ್ರಕ್ರಿಯೆ. ಗಣ್ಯ ವ್ಯಕ್ತಿಗಳ ವಿವರ ಸಂಗ್ರಹಿಸಲು ದಶಕಗಳಿಂದ ನಡೆದು ಬಂದಿರುವ "ಪ್ರೊಫಾರ್ಮಾ' (ವೈಯಕ್ತಿಕ ವಿವರ ಸಂಗ್ರಹ) ವ್ಯವಸ್ಥೆ ಇದು ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ರಾಹುಲ್ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ ಕುರಿತು ದೆಹಲಿ ಪೊಲೀಸ್ ಇಲಾಖೆಯಿಂದ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿದೆ.
ಮಾ.12ರಂದು ದೆಹಲಿ ರಾಹುಲ್ ಗಾಂಧಿ ಅವರ ಮನೆಗೆ ತೆರಳಿದ ಪೊಲೀಸ್ ಸಿಬ್ಬಂದಿ ಯೊಬ್ಬರು ರಾಹುಲ್ ಅವರ ಕುರಿತು ಹಲವಾರು ವಿವರಗಳನ್ನು ಕೇಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ರಾಜಕೀಯ ಎದುರಾಳಿಗಳ ಮೇಲೆ ಗೂಢಚರ್ಯೆ ನಡೆಸುವುದು ಗುಜರಾತ್ ಮಾದರಿ. ಆದರೆ ಅದು ಭಾರತದ ಮಾದರಿ ಅಲ್ಲ ಎಂದು ಪ್ರಧಾನಿ ಮೋದಿ ಅವರ ಹೆಸರೆತ್ತದೆ ಕುಟುಕಿದ್ದಾರೆ.
ಈ ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸ್ ಆಯುಕ್ತ ಭೀಮಸೇನ ಬಸ್ಸಿ, ಅಪರಾಧ ನಿಯಂತ್ರಣ, ಪತ್ತೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಯ ಭಾಗವಾಗಿ ಭದ್ರತೆ ಪಡೆದಿರುವ ಎಲ್ಲ ವ್ಯಕ್ತಿಗಳ ಕುರಿತು ಕಾಲಕಾಲಕ್ಕೆ ಸಮೀಕ್ಷೆ ನಡೆಸಲಾಗುತ್ತದೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಹುಲ್ ಮನೆಗೆ ತೆರಳಿದ ದಿನದಂದೇ ವೀರಪ್ಪ ಮೊಯ್ಲಿ, ಎಲ್.ಕೆ. ಅಡ್ವಾಣಿ, ಕೆ. ಚಂದ್ರಶೇಖ ರರಾವ್, ಎಸ್ಪಿಯ ನರೇಶ ಅಗರ್ವಾಲ್ ಅವರಂಥ ಗಣ್ಯರ ಮನೆಗೂ ಹೋಗಿ ಮಾಹಿತಿ ಸಂಗ್ರಹಿಸಲಾಗಿದೆ. ಇದರ ಹಿಂದೆ ದುರುದ್ದೇಶವಿಲ್ಲ. ಈ ರೀತಿ ಮಾಡಿ ಎಂದು ಪ್ರಧಾನಿ ಕಾರ್ಯಾಲಯ ಅಥವಾ ಗೃಹ ಸಚಿವಾಲಯದಿಂದ ಸೂಚನೆ ಬಂದಿರಲಿಲ್ಲ ಎಂದಿದ್ದಾರೆ.