ನವದೆಹಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗಾಗಿ ದೆಹಲಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ರಾಹುಲ್ ಗಾಂಧಿ ರಜೆ ಮೇಲೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಪದೇ ಪದೇ ಹೇಳುತ್ತಿದ್ದರು ಇದನ್ನು ಗಂಭೀರವಾಗಿ ಪರಿಗಣಿಸದ ದೆಹಲಿ ಪೊಲೀಸ್ ರಾಹುಲ್ ಗಾಗಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.
ರಾಜಕಾರಣದಿಂದ ಕೊಂಚ ನಿರಾಳತೆ ಪಡೆಯುವ ಸಲುವಾಗಿ ಮತ್ತು ಪಕ್ಷದ ಭವಿಷ್ಯದ ಬಗ್ಗೆ ಆತ್ಮಾವಲೋಕನ ನಡೆಸುವುದಕ್ಕಾಗಿ ದಿಢೀರನೆ ರಜೆಯಲ್ಲಿ ಹೋಗಿ ಆ ಬಳಿಕ ಸತತವಾಗಿ ಎರಡು ಬಾರಿ ತನ್ನ ಗೈರನ್ನು ಮುಂದುವರಿಸುತ್ತಲೇ ಹೋಗಿರುವ ರಾಹುಲ್ ಗಾಂಧಿ ಅವರ ಬಗ್ಗೆ ವಿಚಾರಿಸಿಕೊಳ್ಳಲು ದೆಹಲಿ ಪೊಲೀಸರು ಕಳೆದ ವಾರ ಕಾರ್ಯಾಲಯಕ್ಕೆ ಭೇಟಿ ಕೊಟ್ಟಿರುವ ಬಗ್ಗೆ ಕಾಂಗ್ರೆಸ್ ಸಿಡಿಮಿಡಿಗೊಂಡಿದೆ.
ಎಐಸಿಸಿ ಕಚೇರಿಗೆ ತೆರಳಿದ ದೆಹಲಿ ಪೊಲೀಸರು ರಾಹುಲ್ ಗಾಂಧಿ ಚಹರೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ವಿಚಿತ್ರವೆಂದರೆ ಕಳೆದು ಹೋಗಿರುವ ವ್ಯಕ್ತಿಯನ್ನು ಹುಡುಕಾಡುವ ಸಲುವಾಗಿ ಕೇಳಲಾಗುವ ಪ್ರಶ್ನೆಗಳನ್ನು ದೆಹಲಿ ಪೊಲೀಸರು ರಾಹುಲ್ ಗಾಂಧಿ ಕಾರ್ಯಾಲಯದಲ್ಲಿ ಉಪಸ್ಥಿತರಿದ್ದವರಲ್ಲಿ ಕೇಳಿದ್ದು, ರಾಹುಲ್ ಗಾಂಧಿ ಅವರ ಎತ್ತರ, ತೂಕ, ಮೈ ಬಣ್ಣ, ಕಣ್ಣಿನ ಬಣ್ಣ, ಕೂದಲ ಬಣ್ಣ, ಒಟ್ಟಾರೆ ದೈಹಿಕ ನಿಲುವು ಮುಂತಾದ ವಿವರಗಳನ್ನು ಕೇಳಿ ಪಡೆದಿದ್ದಾರೆ.
ದೆಹಲಿ ಪೊಲೀಸರ ಈ ವಿಚಿತ್ರ ಕ್ರಮದಿಂದ ಸಿಟ್ಟಿಗೆದ್ದಿರುವ ಕಾಂಗ್ರೆಸ್ ಪಕ್ಷ ಇದೀಗ, ದೆಹಲಿ ಪೊಲೀಸರ ವಿರುದ್ಧ ದೂರು ದಾಖಲಿಸಲು ಆಲೋಚಿಸುತ್ತಿದೆ.
ಆದರೆ ಮಾಧ್ಯಮದವರು ದೆಹಲಿ ಪೊಲೀಸರನ್ನು ಸಂಪರ್ಕಿಸಿ, ನೀವು ರಾಹುಲ್ ಗಾಂಧಿಯವರ ದೈಹಿಕ ವಿವರಗಳನ್ನು ಕೇಳಿ ಪಡೆದಿರುವುದು ನಿಜವೇ ಎಂದು ಪ್ರಶ್ನಿಸಿದ್ದಕ್ಕೆ ಅವರು "ಇಲ್ಲವೇ ಇಲ್ಲ' ಎಂದು ಉತ್ತರಿಸಿದ್ದಾರೆ.
ತಮ್ಮದೇನಿದ್ದರೂ ಸಾಮಾನ್ಯ ತನಿಖಾ ಕ್ರಮವಾಗಿದ್ದು ಒಟ್ಟಾರೆಯಾಗಿ ನಾವು ರಾಹುಲ್ ಗಾಂಧಿಯವರ ಭದ್ರತೆಗೆ ಪಕ್ಷವು ಎಷ್ಟು ಮಂದಿಯನ್ನು ನಿಯೋಜಿಸಿದೆ ಎಂಬುದನ್ನು ತಿಳಿಯಲು ಬಯಸಿದ್ದೆವು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ವರದಿಗಳ ಪ್ರಕಾರ ಕೇಂದ್ರ ಗೃಹ ಸಚಿವಾಲಯವೇ ದೆಹಲಿ ಪೊಲೀಸರಿಂದ ಈ ಬಗ್ಗೆ ವರದಿಯೊಂದನ್ನು ಕೇಳಿರುವುದಾಗಿ ತಿಳಿದುಬಂದಿದೆ.
ಈ ನಡುವೆ ಕಾಂಗ್ರೆಸ್ ನಾಯಕ ಪಿ.ಸಿ ಚಾಕೋ ಅವರು ದೆಹಲಿ ಪೊಲೀಸರು ಹೀಗೆ ರಾಹುಲ್ ಅವರ ಖಾಸಗಿತನದ ಮೇಲೆ ಅತಿಕ್ರಮಣ ನಡೆಸಿರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ.
ಇದೇ ಮಾರ್ಚ್ 20ರಂದು ಬಜೆಟ್ ಅಧಿವೇಶನ ಮುಗಿಯುವುದರೊಳಗೆ ರಾಹುಲ್ ಗಾಂಧಿ ಅವರು ದಿಲ್ಲಿಗೆ ಮರಳುವರೆಂದು ಪಕ್ಷದ ಕೆಲ ನಾಯಕರು ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ಸುರ್ಜೆವಾಲಾ ಅವರ ಪ್ರಕಾರ ರಾಹುಲ್ ಗಾಂಧಿ ಅವರು ಬಜೆಟ್ ಅಧಿವೇಶನ ಆರಂಭಗೊಂಡ ಫೆ.23ರಿಂದ ಎರಡು ವಾರಗಳ ಮಟ್ಟಿಗೆಂದು ರಜೆಯಲ್ಲಿ ಹೋಗಿದ್ದಾರೆ.
ಆದರೆ ಈಗ ತಿಳಿದುಬಂದಿರುವ ಪ್ರಕಾರ ರಾಹುಲ್ ಗಾಂಧಿ ದಿಲ್ಲಿಗೆ ಮರಳುವುದು ಇನ್ನು ಮಾರ್ಚ್ ಅಂತ್ಯದ ವೇಳೆಗೆ ಎಂದು ಹೇಳಲಾಗಿದೆ.