ನವದೆಹಲಿ : ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತಮಗೆ ಜಾರಿಯಾಗಿರುವ ಸಮನ್ಸ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿರ್ಧರಿಸಿದ್ದಾರೆ.
ಹಿಂಡಾಲ್ಕೊ ಕಂಪೆನಿಯನ್ನು ಒಳಗೊಂಡ ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಓರ್ವ ಆರೋಪಿಯಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ಸಮನ್ಸ್ ಹೊರಡಿಸಿತ್ತು. ಅಲ್ಲದೇ ಏಪ್ರಿಲ್ 8ರಂದು ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಮನಮೋಹನ್ ಸಿಂಗ್, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದು, ಖ್ಯಾತ ಕಾನೂನು ತಜ್ನ ಕಪಿಲ್ ಸಿಬಲ್ ನೇತೃತ್ವದಲ್ಲಿ ಡಾ.ಸಿಂಗ್ ಪರ ವಾದ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಲ್ಲಿದ್ದಲು ಖಾತೆಯನ್ನು ಹೊಂದಿದ್ದ ಸಂದರ್ಭದಲ್ಲಿ ಹಿಂಡಾಲ್ಕೊ ಕಂಪೆನಿಯನ್ನು ಒಳಗೊಂಡಂತೆ ಎರಡನೇ ತಲಬೀರ ಬ್ಲಾಕ್ ನ ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಮತ್ತೋರ್ವ ಆರೋಪಿಯಾಗಿ ಸಿಬಿಐ ನ್ಯಾಯಾಲಯವು ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ.ಪಾರೇಖ್ ಅವರಿಗೂ ಸಮನ್ಸ್ ಜಾರಿ ಮಾಡಿದೆ.
ತಲಬೀರ ಎರಡನೇ ಬ್ಲಾಕ್ ನಲ್ಲಿ ಹಿಂಡಾಲ್ಕೋ ಕಂಪೆನಿಗೆ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಕೋರಿ ಕೈಗಾರಿಕೋದ್ಯಮಿ ಕುಮಾರ ಮಂಗಲಂ ಬಿರ್ಲಾ ಅವರು 2005ರ ಮೇ 7ರಂದು ಮತ್ತು ಜೂನ್ 17ರಂದು ಒಟ್ಟು ಎರಡು ಪತ್ರಗಳನ್ನು ಬರೆದ ತರುವಾಯ ಕಲ್ಲಿದ್ದಲು ಸಚಿವಾಲಯದಲ್ಲಿ ಹಾಗೂ ಪ್ರಧಾನಿ ಕಾರ್ಯಾಲಯದಲ್ಲಿ ಏರ್ಪಟ್ಟ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆಯ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿತ್ತು.
ಮುಖ್ಯವಾಗಿ ಸಿಬಿಐ ಸಾಕ್ಷಿದಾರರಲ್ಲಿ ಒಬ್ಬರಾದ ನೆವೇಲಿ ಲಿಗ್ ನೈಟ ಕಾರ್ಪೊರೇಶನ್ನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಸ್ ಜಯರಾಮನ್ ಅವರ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿರಿಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಸಿಬಿಐ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿರುವುದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭಾರೀ ಇರಿಸುಮುರಿಸು ಉಂಟುಮಾಡಿತ್ತಲ್ಲದೆ ಪ್ರಧಾನಿಯಾಗಿದ್ದ ವೇಳೆಯಲ್ಲಿ ತಾವು ಕೈಗೊಂಡಿದ್ದ ಇತರ ನಿರ್ಧಾರಗಳೂ ಗಂಭೀರವಾಗಿ ಪ್ರಶ್ನಿಸಲ್ಪಡುವ ಭೀತಿಯನ್ನು ಎದುರಿಸುವಂತಾಗಿದೆ.