March 12, 2015
ಬೆಂಗಳೂರು ವೇವ್ಸ್ ಕಚೇರಿಗೆ ಚಿತ್ತೈಸಿದ ರಾಘವೇಶ್ವರಭಾರತೀ ಶ್ರೀಗಳು
ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ
Basavanagudi : ಅದು ಹಲವು ವರ್ಷಗಳ ಕನಸು. ಕೊನೆಗೂ ನನಸಾಯಿತು. ತಮ್ಮ ಕಾರ್ಯಾಲಯದಲ್ಲಿ ಆ ದಿವ್ಯ ಪಾದಾರವಿಂದಗಳು ಒಮ್ಮೆಯಾದರೂ ಅಡಿ ಇಡಲಿ ಎಂಬ ಹೆಬ್ಬಯಕೆ ನನಸಾಗುವುದನ್ನು ಇಡೀ ತಂಡ ಬೆಳಿಗ್ಗೆಯಿಂದಲೇ ಕಾಯುತ್ತಿತ್ತು.
ಹೌದು, ಮಾ.12ರಂದು ಬೆಂಗಳೂರು ವೇವ್ಸ್ ಅಂತರ್ಜಾಲ ಪತ್ರಿಕೆ/ ರಿಷಿ ಸಿಸ್ಟಮ್ಸ್ ಕಚೇರಿಗೆ ಗೋಕರ್ಣ ಮಂಡಲಾಧೀಶ್ವರರಾದ ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಚಿತ್ತೈಸಿದ್ದರು. ಗೋಧೂಳಿ ಸಮಯ. ಗೋವುಗಳನ್ನು ರಕ್ಷಿಸಲು ಪಣತೊಟ್ಟ ಆ ದಿವ್ಯ ಚೇತನದ ಆಗಮನದಿಂದ ಕಚೇರಿಯ ತಂಡಕ್ಕೆ ಉಂಟಾದ ಆನಂದಕ್ಕೆ ಪಾರವೇ ಇರಲಿಲ್ಲ.
ಎಲ್ಲರಿಗೂ ಗುರುಗಳ ಕೃಪೆಗೆ ಪಾತ್ರರಾಗುವ ತವಕ. ಭವಸಾಗರವನ್ನು ಕೈ ಹಿಡಿದು ದಾಟಿಸುವ ಗುರುಗಳನ್ನು ದರ್ಶಿಸಿ, ಮಂತ್ರಾಕ್ಷತೆ ಪಡೆದ ಬಳಿಕ ಧನ್ಯತೆಯ ಭಾವ. ಕೆಲ ಸಮಯ ಕಾರ್ಪೊರೇಟ್ ಕಚೇರಿ ಗುರುಕುಲವಾಗಿ ಪರಿವರ್ತನೆಯಾಗಿತ್ತು.
ಬೆಂಗಳೂರು ವೇವ್ಸ್ ಕಚೇರಿಯಲ್ಲಿ ರಾಘವೇಶ್ವರಭಾರತೀ ಸ್ವಾಮಿಗಳವರು
ಮಂತ್ರಾಕ್ಷತೆ ನೀಡಿದ ಶ್ರೀಗಳು,
ಬೆಂಗಳೂರು ವೇವ್ಸ್ ಅಂತರ್ಜಾಲ ಪತ್ರಿಕೆ,
ರಿಷಿ ಸಿಸ್ಟಮ್ಸ್ ಸಂಸ್ಥೆ ಸಂವೃದ್ಧಿಯಿಂದ ಬೆಳೆಯಲಿ ಎಂದು ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಸತ್ಯಶಂಕರ್ ಮರಕಿಣಿ ಅವರೊಂದಿಗೆ
ರಿಷಿ ಸಿಸ್ಟಮ್ಸ್ ಹಾಗೂ
ಬೆಂಗಳೂರು ವೇವ್ಸ್ ತಂಡದವರೂ ಉಪಸ್ಥಿತರಿದ್ದರು.
ಅನುಷ್ಠಾನ, ಪೂಜಾಕೈಂಕರ್ಯಗಳು, ಅರಸಿ ಬರುವ ಭಕ್ತಜನರಿಗೆ ದರ್ಶನ ನೀಡುವುದು. ಇಂತಹ ಅನೇಕ ಒತ್ತಡಗಳ ನಡುವೆಯೂ ಶ್ರೀ ಸಂಸ್ಥಾನ ಕಚೇರಿಗೆ ಆಗಮಿಸಿದ್ದು ಪುಣ್ಯವೆಂದೇ ಹೇಳಬೇಕು. ಶ್ರೀಗಳ ಆಗಮನದಿಂದ ಕಚೇರಿಗೆ ಹೊಸ ಚೈತನ್ಯ ಮೂಡಿದೆ. ಸಮಾಜಕ್ಕಾಗಿ ಉನ್ನತವಾದದ್ದನ್ನು ನೀಡುವ ಸಂಕಲ್ಪ ಮತ್ತಷ್ಟು ದೃಢವಾಗಿದೆ.