ನವದೆಹಲಿ : ಪ್ರತ್ಯೇಕತಾವಾದಿ ಮಸರತ್ ಆಲಂ ಬಿಡುಗಡೆ ಮಾಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿರುವಾಗಲೇ, ಜಮ್ಮು-ಕಾಶ್ಮೀರ ಒಂದು ವಿವಾದಿತ ಪ್ರದೇಶವಾಗಿದ್ದು, ಭಾರತದ ಭಾಗವಲ್ಲ ಎಂದು ಪ್ರತ್ಯೇಕತಾವಾದಿ ಮುಖಂಡ ಸೈಯ್ಯದ್ ಅಲಿ ಷಾ ಗಿಲಾನಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್, ಹುರಿಯತ್ ಸಂಘಟನೆಯನ್ನು ಹೊಗಳಿದ್ದು, ಕೇವಲ ರಾಜಕೀಯ ತಂತ್ರ. ಜಮ್ಮು-ಕಾಶ್ಮೀರ ಒಂದು ವಿವಾದಿತ ಪ್ರದೇಶ ಎನ್ನುವುದನ್ನು ಭಾರತ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ, ಪ್ರತ್ಯೇಕತಾವಾದಿ ಮಸರತ್ ಆಲಂ ವಿರುದ್ಧ ಇರುವ ಆರೋಪಗಳು ಸುಳ್ಳು. ಮಸರತ್ ಅನೇಕ ಬಾರಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ. ಆತನ ವಿರುದ್ಧದ ಎಲ್ಲಾ ಎಫ್.ಐ.ಆರ್ ಗಳನ್ನು ಕೋರ್ಟ್ ರದ್ದುಗೊಳಿಸಿದೆ. ಆತನ ಬಿಡುಗಡೆಗೆ ಕೋರ್ಟ್ ಸೂಚಿಸಿದೆ. ಹೀಗಾಗಿ ಜಮ್ಮು-ಕಾಶ್ಮೀರ ಸರ್ಕಾರ ಮಸರತ್ ಬಿಡುಗಡೆಗೆ ಆದೇಶ ಕೊಟ್ಟಿದ್ದರಲ್ಲಿ ವಿಶೇಷವೇನೂ ಇಲ್ಲ ಎಂದು ತಿಳಿಸಿದ್ದಾರೆ.