ನವದೆಹಲಿ : ಎರಡು ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಐತಿಹಾಸಿಕ ಭೂಸ್ವಾಧೀನ ಕಾಯ್ದೆಗೆ ಕೆಲವು ಮಹತ್ವದ ತಿದ್ದುಪಡಿಗಳನ್ನು ತರುವ ವಿಧೇಯಕ ಲೋಕಸಭೆಯಲ್ಲಿ ರಾತ್ರಿ ಅಂಗೀಕಾರವಾಗಿದೆ.
ಪ್ರತಿಪಕ್ಷಗಳು ಹಾಗೂ ರೈತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯಲ್ಲಿದ್ದ 9 ಕಠೊರ ಅಂಶಗಳನ್ನು ಬದಲಿಸಲಾಗಿದೆ. ಕೈಗಾರಿಕಾ ಕಾರಿಡಾರ್ ಗೆ ರೈಲ್ವೆ ಹಳಿ ಹಾಗೂ ಹೆದ್ದಾರಿಯ ಎರಡೂ ಬದಿಯಲ್ಲಿ ಒಂದು ಕಿ.ಮೀ.ಗಿಂತ ಹಿಂದಿರುವ ಜಾಗ ವಶಪಡಿಸಿಕೊಳ್ಳಬಾರದು, ಭೂಮಿ ಕಳೆದುಕೊಂಡ ರೈತ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು, ಜಿಲ್ಲಾ ಮಟ್ಟದಲ್ಲೇ ವ್ಯಾಜ್ಯ ವಿಚಾರಣೆ ನಡೆಯಬೇಕು, ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ವಶಪಡಿಸಿಕೊಳ್ಳುವಂತಿಲ್ಲ ಎಂಬುದು ಸೇರಿದಂತೆ ಒಟ್ಟು 9 ತಿದ್ದುಪಡಿಗಳನ್ನು ಸರ್ಕಾರ ವಿಧೇಯಕಕ್ಕೆ ತಂದಿದೆ.
ಲೋಕಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಬೀರೇಂದ್ರ ಸಿಂಗ್ ಅವರು ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದ್ದರು. ಸರ್ಕಾರ ರೈತರ ಪರವಾಗಿಯೇ ಇದೆ. ಇದೇ ಕಾರಣಕ್ಕಾಗಿಯೇ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿದೆ. ಅಗತ್ಯ ಬಿದ್ದರೆ ವಿಪಕ್ಷಗಳು ಸೂಚಿಸುವ ಇನ್ನಷ್ಟು ತಿದ್ದುಪಡಿಗಳನ್ನು ಅಳವಡಿಸಲು ಸಿದ್ಧ ಎಂದು ಅವರು ಸರ್ಕಾರಕ್ಕೆ ಭರವಸೆ ನೀಡಿದರು. ಈ ಬಗ್ಗೆ ಮಂಗಳವಾರ ಸಾಕಷ್ಟು ಚರ್ಚೆ ನಡೆದು ಸಂಜೆ ಮತಕ್ಕೆ ಹಾಕಲಾಯಿತು. ಆದರೆ ಮತದಾನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್ ಜೆಡಿ, ಟಿಎಂಸಿ ಸಭಾತ್ಯಾಗ ಮಾಡಿದವು. ಇನ್ನು ಬಿಜೆಡಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಸದಸ್ಯರು ಸಭಾತ್ಯಾಗ ಮಾಡಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಅನುಕೂಲ ಮಾಡಿಕೊಟ್ಟರು. ಶಿವಸೇನೆ ಮತದಾನದಿಂದ ದೂರ ಉಳಿಯಿತು. ಹೀಗಾದರೂ, ಲೋಕಸಭೆಯಲ್ಲಿ ಹೊಂದಿರುವ ಭಾರಿ ಬೆಂಬಲದಿಂದಾಗಿ ಸರಾಗವಾಗಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಸಫಲವಾಯಿತು.
ಮಸೂದೆ ವಿರುದ್ಧ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಜೆಡಿಯು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹಲವು ತಿದ್ದುಪಡಿಗಳನ್ನು ಸೂಚಿಸಿದರಾದರೂ ಯಾವುದೂ ಅಂಗೀಕಾರವಾಗಲಿಲ್ಲ. ವಿಪಕ್ಷಗಳು ಒಟ್ಟಾರೆ 52 ತಿದ್ದುಪಡಿಗೆ ಬೇಡಿಕೆ ಇಟ್ಟಿದ್ದವು. ಆದರೆ ಇವುಗಳ ಪೈಕಿ ಬಹುತೇಕ ತಿದ್ದುಪಡಿಯನ್ನು ತಿರಸ್ಕರಿಸಲಾಯಿತು, ಇನ್ನು ಕೆಲವು ತಿದ್ದುಪಡಿಗಳನ್ನು ಸದಸ್ಯರು ಮಂಡಿಸಲಿಲ್ಲ.
ಏತನ್ಮಧ್ಯೆ, ಭೂಸ್ವಾಧೀನ ಮಸೂದೆ ವಿಚಾರವಾಗಿ ಮಿತ್ರಪಕ್ಷಗಳನ್ನು ಓಲೈಸುವ ಕೆಲಸವನ್ನು ಬಿಜೆಪಿ ಮಾಡಿತ್ತಾದರೂ, ಶಿವಸೇನೆ ಮತದಾನದಿಂದ ದೂರ ಉಳಿಯುವ ಮೂಲಕ ಬಹಿರಂಗವಾಗಿಯೇ ತನ್ನ ಅಸಮಾಧಾನ ವ್ಯಕ್ತಪಡಿಸಿತು. ಇನ್ನು ಸ್ವಾಭಿಮಾನಿ ಪಕ್ಷದ ರಾಜು ಶೆಟ್ಟಿ, ಭೂಸ್ವಾಧೀನಕ್ಕೆ ರೈತರ ಅನುಮತಿ ಕಡ್ಡಾಯ ಮಾಡುವ ವಿಷಯದ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಕಾಲಿದಳ ಕೂಡಾ ಇದೇ ವಿಷಯದಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಲೋಕಸಭೆಯಲ್ಲಿ ಅಂಗೀಕಾರವಾದ ಈ ವಿಧೇಯಕ ರಾಜ್ಯಸಭೆಯಲ್ಲಿ ಮಂಡನೆಯಾಗಬೇಕಿದೆ. ಆ ಸದನದಲ್ಲಿ ಸಂಖ್ಯಾಬಲದ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಮಸೂದೆಗೆ ಅಂಗೀಕಾರ ಪಡೆದುಕೊಳ್ಳಲು ಯಾವ ತಂತ್ರ ಅನುಸರಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ವಿಪಕ್ಷಗಳು, ವಿಧೇಯಕವನ್ನು ಸ್ಥಾಯಿ ಸಮಿತಿಗೆ ಒಪ್ಪಿಸುವಂತೆ ಆಗ್ರಹಿಸುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಇದಕ್ಕೆ ಸರ್ಕಾರ ಒಪ್ಪಿಕೊಂಡರೆ, ವಿಧೇಯಕ ಸ್ಥಾಯಿ ಸಮಿತಿಯ ಪರಿಶೀಲನೆಗೆ ಹೋಗಲಿದೆ. ಒಂದು ವೇಳೆ ಈ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದರೆ ಮತದಾನಕ್ಕೆ ಮುಂದಾದರೆ, ಅಲ್ಲಿ ವಿಧೇಯಕಕ್ಕೆ ಸೋಲಾಗುವ ಎಲ್ಲಾ ಸಾಧ್ಯತೆಗಳಿವೆ. ಇನ್ನು, ಸಂಸತ್ತಿನ ಜಂಟಿ ಅಧಿವೇಶನ ಕರೆದು ವಿಧೇಯಕ ಅಂಗೀಕರಿಸುವ ತಂತ್ರವನ್ನು ಈಗಾಗಲೇ ಬಿಜೆಪಿ ಸಿದ್ಧಪಡಿಸಿದೆ.