ನವದೆಹಲಿ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಬ್ರಿಟಿಷರ ಏಜೆಂಟ್ ರಾಗಿದ್ದರು ಮತ್ತು ಭಾರತಕ್ಕೆ ಅವರು ದೊಡ್ಡ ಹಾನಿ ಉಂಟುಮಾಡಿದರು ಎಂದು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕಾಟ್ಜು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಭಾರತವು ಹಲವಾರು ಧರ್ಮ, ಜಾತಿ, ಜನಾಂಗ, ಭಾಷೆಗಳ ತವರಾಗಿದ್ದು ಇಲ್ಲಿನ ವೈವಿಧ್ಯವು ಅತ್ಯಪಾರವಾಗಿದೆ. ಬ್ರಿಟಿಷರು ಇದನ್ನು ಚೆನ್ನಾಗಿ ಮನಗಂಡು ಜನರನ್ನು ಈ ಎಲ್ಲ ನೆಲೆಗಳಲ್ಲಿ ವಿಭಜಿಸಿ ಆಳುವ ತಂತ್ರವನ್ನು ಹಿಂದಿನಿಂದಲೇ ಆರಂಭಿಸಿದರು. ಅಂತೆಯೇ ಬ್ರಿಟಿಷರು ಹಲವು ದಶಕಗಳ ಕಾಲ ರಾಜಕಾರಣದಲ್ಲಿ ಧರ್ಮವನ್ನು ಬೆರೆಸುತ್ತಾ ಬಂದು ತಮ್ಮ ಲಾಭಕ್ಕಾಗಿ ಜನರನ್ನು ಧಾರ್ಮಿಕವಾಗಿ ವಿಭಜಿಸಿದರು. ಗಾಂಧಿ ಅವರು ಬ್ರಿಟಿಷರ ಈ ಒಡೆದು ಆಳುವ ತಂತ್ರವನ್ನು ಮುಂದುವರಿಸಿಕೊಂಡು ಬಂದರು ಎಂದು ಕಾಟ್ಜು ತಮ್ಮ ಬ್ಲಾಗ್ ನಲ್ಲಿ ಹೇಳಿದ್ದಾರೆ.
ಗಾಂಧೀಜಿಯವರು 1915ರಲ್ಲಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಮರಳಿದರು. ಅಂದಿನಿಂದ ಅವರು ಸಾಯುವ ತನಕ, ಅಂದರೆ 1948ರ ತನಕದ ಅವರ ಎಲ್ಲ ಭಾಷಣಗಳು ಮತ್ತು ಬರವಣಿಗೆಗಳನ್ನು (ಹರಿಜನ, ಯಂಗ್ ಇಂಡಿಯಾ ಪತ್ರಿಕೆಗಳಲ್ಲಿ ಪ್ರಕಟವಾದವುಗಳು) ಸೂಕ್ಷ್ಮವಾಗಿ ಅವಲೋಕಿಸಿದರೆ ಅವರು ಎಲ್ಲೆಡೆಯೂ ಹಿಂದೂ ಧರ್ಮದ ಚಿಂತನೆಗಳನ್ನೇ ಒತ್ತಿ ಹೇಳುತ್ತಾ ಬಂದರು - ಉದಾಹರಣೆಗೆ ರಾಮರಾಜ್ಯ, ಗೋರಕ್ಷಾ, ಬ್ರಹ್ಮಚರ್ಯ, ವರ್ಣಾಶ್ರಮ ಧರ್ಮ (ಜಾತಿ ಪದ್ಧತಿ) ಇತ್ಯಾದಿ.
1921ನ ಜೂ.10ರಂದು ಯಂಗ್ ಇಂಡಿಯಾದಲ್ಲಿ ಗಾಂಧೀಜಿಯವರು ಬರೆಯುತ್ತಾರೆ- ನಾನೋರ್ವ ಸನಾತನಿ ಹಿಂದು. ನಾನು ವರ್ಣಾಶ್ರಮ ಧರ್ಮವನ್ನು ನಂಬುತ್ತೇನೆ. ಗೋವುಗಳ ರಕ್ಷಣೆಯಲ್ಲಿ ವಿಶ್ವಾಸ ಇರಿಸಿದ್ದೇನೆ. ಗಾಂಧೀಜಿಯವರು ತಮ್ಮ ಸಭೆಗಳಲ್ಲಿ ಹಿಂದು ಭಜನೆಗಳನ್ನು ಹಾಡುತ್ತಿದ್ದರು. ರಘುಪತಿ ರಾಘವ ರಾಜಾರಾಮ್ ಎನ್ನುವ ಭಜನೆ ಅವರಿಗೆ ಅತ್ಯಂತ ಪ್ರಿಯವಾಗಿತ್ತು ಎಂದು ಕಾಟ್ಜು ಹೇಳಿದ್ದಾರೆ.
ಗಾಂಧೀಜಿಯವರಂತಹ ನಾಯಕರಿಂದಾಗಿ 20ನೇ ಶತಮಾನದ ಮೊದಲರ್ಧದಲ್ಲಿ ಭಾರತೀಯರು ಧಾರ್ಮಿಕರಾಗಿಯೇ ಕಂಡು ಬಂದರು. ಹಿಂದೂ ಚಿಂತನೆಗಳನ್ನು ಬೋಧಿಸುವ ಭಜನೆಗಳನ್ನು ಹಾಡುವ ಕ್ರಮವು ಒಬ್ಬ ಸಾಧುವಿಗೆ ಅಥವಾ ಸ್ವಾಮೀಜಿಗೆ ಅವರವರ ಆಶ್ರಮದಲ್ಲಿ ತಕ್ಕುದಾಗಿಯೇ ಇರುತ್ತದೆ. ಆದರೆ ಒಬ್ಬ ರಾಜಕೀಯ ನಾಯಕ ದಿನಂಪ್ರತಿ ಎಂಬಂತೆ ಸಾರ್ವಜನಿಕವಾಗಿ ಹೀಗೆ ಮಾಡಿದಾಗ ಸಂಪ್ರದಾಯಬದ್ಧ ಮುಸ್ಲಿಮನಿಗೆ ಏನನ್ನಿಸುತ್ತದೆ. ತಾನೂ ಧರ್ಮ ಶ್ರದ್ಧಾಳು ಆಗಬೇಕು ಎಂದನಿಸುವುದಿಲ್ಲ. ಹಾಗಾಗಿ ಆತ ಮುಸ್ಲಿಂ ಮೂಲಭೂತ ಸಂಘಟನೆಗಳತ್ತ ಮುಖ ಮಾಡುವುದು ಸಹಜವೇ. ಹಾಗಾಗಿಯೇ ಮುಸ್ಲಿಮರು ಮುಸ್ಲಿಂ ಲೀಗ್ ನತ್ತ ಹೊರಳಿಕೊಂಡರು. ಹೀಗೆ ರಾಜಕಾರಣದಲ್ಲಿ ಧರ್ಮವನ್ನು ಬೆರೆಸುವ ಮೂಲಕ ಗಾಂಧಿ, ಬ್ರಿಟಿಷರ ಒಡೆದು ಆಳುವ ನೀತಿಯನ್ನು ಮುಂದುವರಿಸಿದರು. ಆ ಮೂಲಕ ಗಾಂಧಿ ಬ್ರಿಟಿಷರ ಸಕ್ರಿಯ ಏಜಂಟ್ ಆಗಿ ಕಾರ್ಯನಿರ್ವಹಿಸಿದರು ಎಂದು ಕಾಟ್ಜು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಗಾಂಧೀಜಿಯವರು ಕ್ರಾಂತಿಕಾರಿ ನಾಯಕರಾದ ಸೂರ್ಯಸೇನ, ರಾಮಪ್ರಸಾದ ಬಿಸ್ಮಿಲ್, ಚಂದ್ರಶೇಖರ ಆಝಾದ್, ಅಶ್ಫಕುಲ್ಲಾ, ಭಗತ್ ಸಿಂಗ್, ರಾಜಗುರು (ಇವರನ್ನೆಲ್ಲ ಬ್ರಿಟಿಷರು ನೇಣಿಗೇರಿಸಿದ್ದಾರೆ) ಮೊದಲಾದವರ ಕ್ರಾಂತಿಕಾರಿ ತತ್ವಗಳನ್ನೆಲ್ಲ ಬದಿಗೊತ್ತಿ ಅಹಿಂಸೆಯ ಅಸಂಬದ್ಧ "ಸತ್ಯಾಗ್ರಹ' ಚಳವಳಿಯ ಮೂಲಕ ಬ್ರಿಟಿಷ್ ಹಿತಾಸಕ್ತಿಗಳ ರಕ್ಷಕರಾಗಿ, ಬ್ರಿಟಿಷರ ಏಜಂಟರಾಗಿ, ದುಡಿದರು ಎಂಬುದು ಕಾಟ್ಜು ವಾದವಾಗಿದೆ.
ಗಾಂಧಿ ಅವರ ಆರ್ಥಿಕ ಚಿಂತನೆಗಳು ಗ್ರಾಮ ಕೇಂದ್ರಿಕೃತವಾಗಿದ್ದು ಸ್ವಾವಲಂಬನೆಯ ಉದ್ದೇಶ ಹೊಂದಿತ್ತು. ಹಾಗಿದ್ದರೂ ಭಾರತೀಯ ಗ್ರಾಮಗಳು ಜಾತಿ ಪದ್ಧತಿಯ ನೆಲಗಟ್ಟನ್ನು ಮತ್ತು ಜಮೀನುದಾರಿ ಪದ್ಧತಿಯನ್ನು ಹೊಂದಿದ್ದವು. ಗಾಂಧಿ ಕೈಗಾರಿಕೀಕರಣದ ವಿರೋಧಿಗಳಾಗಿದ್ದರು. ಕೈಯಿಂದ ನೂಲುವ ಚರಕವನ್ನು ಪ್ರತಿಪಾದಿಸಿದರು. ಅವರ ಅನೇಕ ಚಿಂತನೆಗಳು ಜನರನ್ನು ಮೋಸ ಮಾಡುವಂತಿದ್ದವು ಎಂದು ಕಾಟ್ಜು ಹೇಳಿದ್ದಾರೆ.