ನವದೆಹಲಿ: : ನಕ್ಸಲ್ ವಿರುದ್ಧ ಕಾರ್ಯಾಚರಣೆಗೆ ನಿಯೋಜನೆಗೊಂಡಿರುವ ಕೇಂದ್ರೀಯ ಭದ್ರತಾ ಪಡೆ (ಸಿ.ಆರ್.ಪಿ.ಎಫ್) ಯೋಧರು ನಕ್ಸಲರ ಗುಂಡು, ಬಾಂಬ್ ದಾಳಿಗಿಂತ ಆತ್ಮಹತ್ಯೆ, ಕಾಯಿಲೆಗಳಿಗೇ ಹೆಚ್ಚು ಬಲಿಯಾಗುತ್ತಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಅಧಿಕ ಕಾರ್ಯದೊತ್ತಡ ಹಾಗೂ ಕರ್ತವ್ಯ ಸ್ಥಳದಲ್ಲಿನ ಕೆಟ್ಟ ವಾತಾವರಣ ಸಹಿಸಲಾರದೆ 2012ರಿಂದ 2014ರವರೆಗೆ 370 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಸರಾಸರಿ ಪ್ರತಿ 3 ದಿನಕ್ಕೊಬ್ಬ ಸಿ.ಆರ್.ಪಿ.ಎಫ್ ಯೋಧ ಸಾವಿಗೆ ಶರಣಾಗಿದ್ದಾನೆ.
ಹೃದಯಾಘಾತ, ಮಲೇರಿಯಾ ಹಾಗೂ ಎಚ್ ಐವಿ ಸೋಂಕಿನಿಂದ ಕಳೆದ ಐದು ವರ್ಷಗಳಲ್ಲಿ 1,131 ಯೋಧರು ಸಾವನ್ನಪ್ಪಿದ್ದಾರೆ. ಆದರೆ ನಕ್ಸಲರ ದಾಳಿಯಿಂದ ಈ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ಸಂಖ್ಯೆ 323 ಎಂದು ಅಂಕಿ-ಅಂಶಗಳು ತಿಳಿಸಿವೆ.
ದೇಶದ ಅತಿದೊಡ್ಡ ಅರೆಸೇನಾ ಪಡೆಯಾಗಿರುವ ಸಿ.ಆರ್.ಪಿ.ಎಫ್ ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ನಕ್ಸಲ್ ವಿರುದ್ಧ ಕಾರ್ಯಾಚರಣೆ, ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೆಣಸಾಟ ಸೇರಿದಂತೆ ಹಲವು ಕರ್ತವ್ಯಗಳಲ್ಲಿ ತೊಡಗಿರುವ ಈ ಪಡೆಯ ಸಿಬ್ಬಂದಿ ಅಧಿಕ ಕಾರ್ಯದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಒತ್ತಡ ತಾಳಲಾರದೆ ಸಿ.ಆರ್.ಪಿ.ಎಫ್ ತೊರೆಯುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. 2014ನೇ ಸಾಲಿನಲ್ಲಿ ಪ್ರತಿ ನಿತ್ಯ ಸರಾಸರಿ 20 ಮಂದಿಯಂತೆ 6 ಸಾವಿರ ಯೋಧರು ಸೇವೆ ತೊರೆದಿದ್ದಾರೆ. 2013ರಲ್ಲಿ ಕೆಲಸ ಬಿಟ್ಟವರ ಸಂಖ್ಯೆ 4,186 ಇತ್ತು ಎಂದು ಹೇಳಿದೆ.