ನವದೆಹಲಿ : 'ನಿರ್ಭಯಾ' ಸಾಕ್ಷ್ಯಚಿತ್ರದ ಸಂಬಂಧ ಒಂದೊಂದೇ ಸತ್ಯಗಳು ಹೊರಬೀಳಲಾರಂಭಿಸಿವೆ.
ಸಾಕ್ಷ್ಯಚಿತ್ರ ನಿರ್ಮಿಸಿದ್ದ ಬಿಬಿಸಿಯ ಲೆಸ್ಲಿ ಉಡ್ವಿನ್ ಅವರ ಹಿನ್ನಲೆಯನ್ನು ಪರಿಶೀಲಿಸದೇ ಗೃಹ ಸಚಿವಾಲಯ ತಿಹಾರ್ ಜೈಲಿಗೆ ತೆರಳಲು ವಿದೇಶಿ ಪತ್ರಕರ್ತೆಗೆ ಅನುಮತಿ ನೀಡಿತ್ತು ಎಂಬ ವಿಷಯ ಬಯಲಾದ ಬೆನ್ನಲ್ಲೇ, ಸಾಕ್ಷ್ಯ ಚಿತ್ರ ನಿರ್ಮಿಸುವ ಸಂದರ್ಭದಲ್ಲಿ ತಿಹಾರ್ ಜೈಲಿಗೆ ಭೇಟಿ ನೀಡಿದ್ದ ಲೆಸ್ಲಿ ಉಡ್ವಿನ್, ಗೃಹ ಸಚಿವಾಲಯದ ಅಧಿಕಾರಿಗಳನ್ನೇ ಯಾಮಾರಿಸಿದ್ದರು ಎಂಬ ಅಂಶ ಬಹಿರಂಗವಾಗಿದೆ.
ತಿಹಾರ್ ಜೈಲಿಗೆ ತೆರಳಲು ಅನುಮತಿ ಕೋರಿದ್ದ ಅರ್ಜಿಯಲ್ಲಿ ಲೆಸ್ಲಿ ಉಡ್ವಿನ್, ತನ್ನ ಕೆಲಸ ಮೂಲ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿರಲಿಲ್ಲ. ಅಲ್ಲದೇ ತಾನು ಸಾಕ್ಷ್ಯ ಚಿತ್ರಕ್ಕಾಗಿ ನಿರ್ಭಯಾ ಪ್ರಕರಣದ ಅಪಾರಾಧಿಯನ್ನು ಸಂದರ್ಶಿಸುವುದಾಗಿ ಎಲ್ಲಿಯೂ ತಿಳಿಸಿರಲಿಲ್ಲ ಎಂದು ಗೃಹ ಇಲಾಖೆ ಅಧಿಕಾರಿಗಳು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.
ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಅಧಿಕಾರಿಗಳು, ತಿಹಾರ್ ಜೈಲಿನಲ್ಲಿದ್ದ ಒಂದು ಡಜನ್ ಗಿಂತಲೂ ಹೆಚ್ಚು ಅಪರಾಧಿಗಳನ್ನು ಲೆಸ್ಲಿ ಉಡ್ವಿನ್ ಚಿತ್ರೀಕರಿಸಿಕೊಂಡಿದ್ದರು. ಆದರೆ ಮುಖೇಶ್ ಸಿಂಗ್ ನನ್ನು ಮಾತ್ರ ಸಂದರ್ಶನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಅರ್ಜಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಅಪರಾಧಿಗಳನ್ನು ಮಾತ್ರ ಚಿತ್ರೀಕರಿಸುವುದಾಗಿ ಲೆಸ್ಲಿ ಉಡ್ವಿನ್ ತಿಳಿಸಿದ್ದರು. ಮುಖೇಶ್ ನನ್ನು ಸಂದರ್ಶನ ಮಾಡುವ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿದ್ದರೆ ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.