ನಾಗ್ಪುರ : ದಿಢೀರ್ ರಜೆ ಮೇಲೆ ತೆರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮುಂದಿನ ವಾರ ವಾಪಸ್ ಆಗಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಮಲನಾಥ್ ತಿಳಿಸಿದ್ದಾರೆ.
ಮುಂಬರುವ ಐದು ದಿನಗಳಲ್ಲಿ ರಾಹುಲ್ ಅವರು ರಾಜಕಾರಣದಲ್ಲಿ ಸಕ್ರಿಯರಾಗಲಿದ್ದಾರೆ. ನಾಯಕತ್ವದ ಹೊಣೆ ಹೊತ್ತುಕೊಳ್ಳುವ ಸಾಮರ್ಥ್ಯ ರಾಹುಲ್ ಅವರಲ್ಲಿದೆ. ಹೀಗಾಗಿ ಅವರಿಗೆ ಜವಾಬ್ದಾರಿ ಹೊರಿಸಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾದ ದಿನವೇ ರಾಹುಲ್ ಅವರು ರಜೆ ಮೇಲೆ ತೆರಳಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ದೇಶವನ್ನು ಕಾಡುತ್ತಿರುವ ವಿಷಯಗಳು ಹಾಗೂ ಸಂಸತ್ತಿನ ಚರ್ಚೆ ಬಗ್ಗೆ ರಾಹುಲ್ ಗೆ ಇರುವ ಆಸಕ್ತಿಯನ್ನು ಇದು ತೋರಿಸುತ್ತದೆ ಎಂದು ಬಿಜೆಪಿ ಮತ್ತಿತರ ಪಕ್ಷಗಳು ಕಿಡಿಕಾರಿದ್ದವು. ಆದರೆ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳಲು ಸ್ವಾತಂತ್ರ್ಯ ಇಲ್ಲದ ಕಾರಣ ರಾಹುಲ್ ಅವರು ರಜೆ ಮೇಲೆ ತೆರಳಲಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬ ಬಗ್ಗೆ ಆಲೋಚನೆ ನಡೆಸಲು ಅವರು ಬಿಡುವು ಪಡೆದಿದ್ದಾರೆ ಎಂದು ಕಾಂಗ್ರೆಸ್ಸಿಗರು ಸಮರ್ಥಿಸಿಕೊಂಡಿದ್ದರು.