ನವದೆಹಲಿ : ನಿಷೇಧದ ನಡುವೆಯೂ ಬಿಬಿಸಿ ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರವನ್ನು ಕೂಡಲೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಯುಟ್ಯೂಬ್ ಗೆ ಸೂಚನೆ ನೀಡಿದೆ.
ಭಾರತ ಸರ್ಕಾರದ ನಿಷೇಧದ ಹೊರತಾಗಿಯೂ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ್ದಲ್ಲದೆ, ಯುಟ್ಯೂಬ್ ನಲ್ಲಿ ಅದನ್ನು ಅಪ್ಲೋಡ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಯೂಟ್ಯೂಬ್ ನಲ್ಲಿ ಸಾಕ್ಷ್ಯಚಿತ್ರವನ್ನು ತೆಗೆದುಹಾಕಬೇಕೆಂದು ಸೂಚನೆ ನೀಡಿದೆ.
ದೆಹಲಿಯಲ್ಲಿ ೨೦೧೩ರಲ್ಲಿ ನಡೆದ 'ನಿರ್ಭಯ' ಅತ್ಯಾಚಾರ ವಿಷಯವಾಗಿಟ್ಟುಕೊಂಡು ಈ ಸಾಕ್ಷ್ಯ ಚಿತ್ರವನ್ನು ಬಿಬಿಸಿಗಾಗಿ ತಯಾರಿಸಲಾಗಿದೆ. ಅತ್ಯಾಚಾರಿ ಮುಕೇಶ್ ನನ್ನು ಜೈಲಿನಲ್ಲಿ ಸುದೀರ್ಘವಾಗಿ ಸಂದರ್ಶನ ಮಾಡಿರುವ ನಿರ್ಮಾಪಕಿ ಅತ್ಯಾಚಾರದ ಎಳೆ ಎಳೆಯನ್ನೂ ಬಿಡಿಸಿಟ್ಟಿರುವುದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಒಳಗಾಗಿದೆ. ಕೇಂದ್ರ ಸರಕಾರ ಇದರ ಪ್ರಸಾರವನ್ನು ಈಗಾಗಲೇ ನಿಷೇಧಿಸಿದ್ದರೂ ಬಿಬಿಸಿ ಸಂಸ್ಥೆ ಅದನ್ನು ಪ್ರಸಾರ ಮಾಡಿದ್ದು, ಇದು ಅಂತರ್ಜಾಲದಲ್ಲೂ ಹರಿದಾಡುತ್ತಿದೆ.
ಬಿಬಿಸಿಯ ಈ ಉದ್ಧಟತನಕ್ಕೆ ಕೇಂದ್ರ ಸರಕಾರ ಪ್ರತಿಕ್ರಿಯಿಸಿದ್ದು, 'ಸಾಕ್ಶ್ಯಚಿತ್ರವನ್ನು ಪ್ರಸಾರ ಮಾಡಿರುವ ಘಟನೆ ನೋವು ತಂದಿದೆ, ಪ್ರಸಾರ ಮಾಡಿರುವ ಬಿಬಿಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ನಡುವೆ ಸಾಕ್ಷ್ಯ ಚಿತ್ರದ ನಿರ್ದೇಶಕಿ ಲೆಸ್ವಿ ಉಡ್ವಿನ್ ಬಂಧನದ ಭೀತಿಯಿಂದ ಈಗಾಗಲೇ ಭಾರತ ತೊರೆದಿದ್ದು ಇಂಗ್ಲೆಂಡ್ ಗೆ ತೆರಳಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.